ಅಹಮದಾಬಾದ್, ಅಕ್ಟೋಬರ್ 09: ಕಬಡ್ಡಿ ವಿಶ್ವಕಪ್ ಗೆಲ್ಲುವ ಫೇವರೀಟ್ ತಂಡ ಭಾರತ ತನ್ನ ಮೊದಲ ಪಂದ್ಯದ ಅಘಾತಕಾರಿ ಸೋಲಿನಿಂದ ಹೊರ ಬಂದಿದೆ. ದಕ್ಷಿಣ ಕೊರಿಯಾ ವಿರುದ್ಧದ ಸೋಲಿನ ಸಿಟ್ಟನ್ನು ದುರ್ಬಲ ಆಸ್ಟ್ರೇಲಿಯಾ ವಿರುದ್ಧ ತೀರಿಸಿಕೊಂಡಿದೆ. 54-20 ಅಂತರದಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ.
ಟ್ರಾನ್ಸ್ ಸ್ಟೇಡಿಯಾ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಹಿಡಿತ ಸಾಧಿಸಿದ ಅನೂಪ್ ಕುಮಾರ್ ನೇತೃತ್ವದ ತಂಡ ಆಸೀಸ್ ಗೆ ಕಬಡ್ಡಿ ಪಾಠ ಹೇಳಿಕೊಟ್ಟಿತು. [ವಿಶ್ವಕಪ್ ಕಬಡ್ಡಿ 2016: ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ]

ಮೊದಲಾರ್ಧ ಅವಧಿಯ ನಂತರ 32-7 ಪಾಯಿಂಟ್ಗಳಿಂದ ಭರ್ಜರಿ ಮುನ್ನಡೆ ಸಾಧಿಸಿದ ಭಾರತ ಹಿಂತಿರುಗಿ ನೋಡಲಿಲ್ಲ. ಮೊದಲಾರ್ಧ ಅವಧಿಯ ಮೊದಲ 15 ನಿಮಿಷಗಳಲ್ಲೆ ಆಸ್ಟ್ರೇಲಿಯಾ ತಂಡವನ್ನು ಎರಡು ಬಾರಿ ಆಲೌಟ್ ಮಾಡಿದ ಭಾರತ ಬೋನಸ್ ಅಂಕ ಗಳಿಸಿ ಮುನ್ನುಗ್ಗಿತು.
ಏಳು ಬಾರಿ ವಿಶ್ವ ಚಾಂಪಿಯನ್ ಭಾರತದ ಪರ ದೀಪಕ್ ಹೂಡಾ(6), ಪ್ರದೀಪ್ ನರ್ವಾಲ್(5)ಮಂಜಿತ್ ಚಿಲ್ಲರ್(5), ಮತ್ತು ಸಂದೀಪ್ ನರ್ವಾಲ್(4) ಅಂಕ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಬದಲಿ ಆಟಗಾರ ನಾಗಿ ಬಂದ ಅಜಯ್ ಠಾಕೂರ್ ಅವರು 7 ಅಂಕ ಗಳಿಸಿ ಗಮನ ಸೆಳೆದರು. ಭಾರತ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 11 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ.
ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ 34- 32 ಅಂತರದಿಂದ ಅಚ್ಚರಿಯ ಸೋಲು ಕಂಡಿತ್ತು.