ಪ್ರೊ ಕಬಡ್ಡಿ ಕ್ರಿಕೆಟ್ ಟೂರ್ನಿ ಆಗಸ್ಟ್ 29 ರಿಂದ ಆರಂಭವಾಗಲಿದೆ. ಈ ಟೂರ್ನಿಗೆ ಮಾಜಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ಸಹ ತಯಾರಿ ನಡೆಸಿದೆ. ಮತ್ತೊಮ್ಮೆ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ನಿಟ್ಟಿನಲ್ಲಿ ಬುಲ್ಸ್ ಚಿತ್ತ ನೆಟ್ಟಿದೆ. ಈ ಬಾರಿ ಬುಲ್ಸ್ ತಂಡ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಹೊಚ ಕೋಚ್ ಹಾಗೂ ಅನುಭವಿ ಆಟಗಾರರು ತಂಡದ ಬಲವನ್ನು ಹೆಚ್ಚಿಸಿದ್ದಾರೆ. ಹಾಗಿದ್ದಾರೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ ತಂಡದ ಬಲ ಹಾಗೂ ದುರ್ಬಲಗಳು ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಬುಲ್ಸ್ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ತಂಡಕ್ಕೆ ಮೊದಲ ಆವೃತ್ತಿಯಿಂದ ಕೋಚ್ ಆಗಿದ್ದ ರಣಧೀರ್ ಸಿಂಗ್ ಸೆಹ್ರಾವತ್ ಅವರನ್ನು ಕೆಳಗಿಳಿಸಲಾಗಿದೆ. ಇವರ ಉಸ್ತುವಾರಿಯಲ್ಲಿ ಬೆಂಗಳೂರು 11 ಸೀಸನ್ಗಳಲ್ಲಿ 6ರಲ್ಲಿ ಪ್ಲೇ ಆಫ್ ಪ್ರವೇಶಿಸಿತ್ತು. ಈ ಬಾರಿ ಬುಲ್ಸ್ ತಂಡಕ್ಕೆ ಬಿ.ಸಿ. ರಮೇಶ್ ಕೋಚ್ ಆಗಿದ್ದಾರೆ. ಬೆಂಗಳೂರಿನ ಬಿಸಿ ರಮೇಶ್ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸುವ ಪಣ ತೊಟ್ಟಿದ್ದಾರೆ. ಬಿಸಿ ರಮೇಶ್ ಒಬ್ಬ ನುರಿತ ಕೋಚ್. ಇವರ ಗರಡಿಯಲ್ಲಿ ಬೆಂಗಾಲ್ ವಾರಿಯರ್ಸ್, ಪುಣೇರಿ ಪಲ್ಟನ್ ತಂಡಗಳು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದವು.

ಬೆಂಗಳೂರು ಬುಲ್ಸ್ ಈ ಬಾರಿ ಹರಾಜಿನಲ್ಲಿ ಹಲವು ಯುವ ಹಾಗೂ ಪ್ರತಿಭಾನ್ವಿತ ಆಟಗಾರರಿಗೆ ಮಣೆ ಹಾಕಿದೆ. ಕಳೆದ ಆವೃತ್ತಿಯ ನ್ಯೂನತೆಗಳನ್ನು ಮೆಟ್ಟಿ ನಿಂತು ಬಲಾಢ್ಯ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ತಂಡ ಚಿತ್ತ ನೆಟ್ಟು, ಹರಾಜಿನಲ್ಲಿ ಆಟಗಾರರನ್ನು ಆಯ್ಕೆ ಮಾಡಿದೆ.
ಈ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ರಕ್ಷಣಾ ವಿಭಾಗ ಬಲವಾಗಿದೆ. ರೈಟ್ ಕಾರ್ನರ್ಬ್ಯಾಕ್ ಯೋಗೇಶ್ ದಹಿಯಾ ತಂಡ ಸೇರಿಕೊಂಡಿದ್ದಾರೆ. ಇವರು ಪಿಕೆಎಲ್ ಇತಿಹಾಸದಲ್ಲಿ ಅತಿ ದುಬಾರಿ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಎಡ ಕಾರ್ನರ್ನಲ್ಲಿ ಅಂಕುಶ್ ರಥೀ ತಂಡಕ್ಕೆ ಆನೆ ಬಲ ತುಂಬಿರುವ ಆಟಗಾರ. ಈ ಇಬ್ಬರೂ ಸ್ಟಾರ್ ಡಿಫೆಂಡರ್ಗಳಿಗೆ ಸಂಜಯ್ ಧುಲ್ ಕವರ್ನಲ್ಲಿ ನೆರವಾಗಬಲ್ಲ ಪ್ರತಿಭೆ. ಉಳಿದಂತೆ ಲಕ್ಕಿ ಕುಮಾರ್, ದೀಪಕ್ ಎಸ್, ಶುಭಮ್ ರಹಾಟೆ, ಮನೀಶ್ ಮತ್ತು ಸತ್ಯಪ್ಪ ಮೈಟಿ ಪ್ರತಿಭಾನ್ವಿತ ಡಿಫೆಂಡರ್ಗಳಾಗಿದ್ದಾರೆ. ಇವರು ಸಹ ಅವಕಾಶ ಸಿಕ್ಕಾಗ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಡಿಫೆಂಡೆನ್ಸಿಯನ್ನು ನೋಡಿದಾಗ ದಾಳಿ ಬುಲ್ಸ್ ತಂಡದ ವೀಕ್ನೆಸ್ ಅನಿಸುತ್ತದೆ. ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಯುವ ಆಟಗಾರರಾದ ಮಂಜೀತ್ ಹಾಗೂ ಪಂಕಜ್ ಅವರನ್ನು ತಂಡ ಉಳಿಸಿಕೊಂಡಿದ್ದು, ಇವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ರೈಡಿಂಗ್ ವಿಭಾಗಕ್ಕೆ ಆಕಾಶ್ ದೀಪ್ ಬಲ ತುಂಬವ ಪ್ಲೇಯರ್. ಇವರು ಒಟ್ಟಾರೆ ಪಿಕೆಎಲ್ನಲ್ಲಿ ಆಡಿದ 57 ಪಂದ್ಯಗಳಲ್ಲಿ 296 ಅಂಕಗಳನ್ನು ಕಲೆ ಹಾಕಿದ್ದಾರೆ. ಉಳಿದಂತೆ ಪಿರತಿ, ಗಣೇಶ ಬಿ., ಶುಭಂ ಬಿಟಾಕೆ ಮತ್ತು ಮಹಿಪಾಲ್ ತಂಡದ ಗೆಲುವಿನಲ್ಲಿ ಮಿಂಚಬೇಕಿದೆ. ಅಂದಾಗ ಬುಲ್ಸ್ ಮುನ್ನಡೆಯ ಕನಸು ನನಸಾಗುತ್ತದೆ.