
ಮುಂಬೈ, ಏಪ್ರಿಲ್ 9: ಮುಂಬೈನಲ್ಲಿ ಮಂಗಳವಾರ (ಏಪ್ರಿಲ್ 9) ಕೊನೆಗೊಂಡ ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಸಿದ್ಧಾರ್ಥ್ ದೇಸಾಯ್ ಮತ್ತು ನಿತಿನ್ ತೋಮರ್ 1 ಕೋಟಿ ರೂ.ಗೂ ಹೆಚ್ಚಿನ ಬೆಲೆಗೆ ಮಾರಾಟವಾಗುವ ಮೂಲಕ ಗಮನ ಸೆಳೆದರು. ಇಬ್ಬರನ್ನೂ ಫ್ರಾಂಚೈಸಿಗಳು 'ಎ' ಕೆಟಗರಿಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಿದವು.
ಸಿದ್ಧಾರ್ಥ್ ಅವರನ್ನು ತೆಲುಗು ಟೈಟಾನ್ಸ್ ಖರೀದಿಸಿದರೆ, ನಿತಿನ್ ಪೂಣೇರಿ ಪಲ್ಟಾನ್ ಪಾಲಾದರು. ಡಿಫೆಂಡರ್ ಮಣೀಂದ್ ಸಿಂಗ್ 80 ಲಕ್ಷ ರೂ. ಬೆಲೆಗೆ ಬೆಂಗಳೂರು ಬುಲ್ಸ್ ಸೇರಿಕೊಂಡಿದ್ದಾರೆ. ರೈಡರ್ ಮನ್ಜೀತ್ ಸಿಂಗ್ ಅವರನ್ನು 63 ಲಕ್ಷ ರೂ.ಗೆ ಪುಣೇರಿ ಪಲ್ಟಾನ್ಸ್ ಖರೀದಿಸಿತು. ಆಲ್ ರೌಂಡರ್ ಸಂದೀಪ್ ನರ್ವಾಲ್ ಅವರನ್ನು ಯು ಮುಂಬಾ 89 ಲಕ್ಷ ರೂ.ಗೆ ಖರೀದಿಸಿದೆ.
ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ನಡೆದ ಪಿಕೆಎಲ್ ಹರಾಜಿನಲ್ಲಿ ಒಟ್ಟು 12 ಫ್ರಾಂಚೈಸಿಗಳು ತಲಾ 50 ಕೋ.ರೂ.ನಲ್ಲಿ ದೇಸಿ ಮತ್ತು ಅಂತಾರಾಷ್ಟ್ರೀಯ ಸೇರಿ 200 ಆಟಗಾರರಲ್ಲಿ ಆಯ್ಕೆ ನಡೆಸಿ ಖರೀದಿಸಿಕೊಂಡರು. ತಮ್ಮ ತಂಡಗಳನ್ನು ಬಲಪಡಿಸಿಕೊಂಡರು.
ಪಿಕೆಎಲ್ 7ನೇ ಸೀಸನ್ ಜುಲೈ 1ರಿಂದ ಅಕ್ಟೋಬರ್ 9ರ ವರೆಗೆ ನಡೆಯಲಿದೆ. ಈ ಸಾರಿ ಟೂರ್ನಿಯಲ್ಲಿ ಒಟ್ಟು 173 ದೇಸಿ ಆಟಗಾರರು ಮತ್ತು 27 ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಪಿಕೆಎಲ್ ಸೀಸನ್ 6ರಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.