
ದುಬೈ, ಜು. 1: ಶನಿವಾರ ನಡೆದ ಕಬಡ್ಡಿ ಮಾಸ್ಟರ್ಸ್ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ, ಇರಾನ್ ವಿರುದ್ಧ 44-26ರ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯದ ಆರಂಭದಿಂದಲೂ ಪ್ರಾಬಲ್ಯ ಮೆರೆದ ಭಾರತ ತಂಡ ಇರಾನ್ ಎದುರು ಸುಲಭ ಗೆಲುವು ಸಾಧಿಸಿತು.
ಆರು ರಾಷ್ಟ್ರಗಳು ಪಾಲ್ಗೊಂಡಿದ್ದ ಈ ಕಬಡ್ಡಿ ಪಂದ್ಯಾಟದ ಫೈನಲ್ ಹಣಾಹಣಿಯಲ್ಲಿ ಎದುರಾಳಿ ಇರಾನ್ ಕೂಡ ಅಂಕ ಕದಿಯಲು ಸಾಕಷ್ಟು ಹೋರಾಟ ನಡೆಸಿತು. ಆದರೆ ಮೂರು ಬಾರಿಯ ವಿಶ್ವ ಚಾಂಪಿಯನ್ ಭಾರತ ಹೆಚ್ಚು ಅಂಕ ಗಳಿಸಲು ಇರಾನ್ ಗೆ ಅವಕಾಶ ನೀಡಲಿಲ್ಲ.
ಪಂದ್ಯದ ವೇಳೆ ನಾಯಕ ಅಜಯ್ ಠಾಕೂರ್ (9 ಪಾಯಿಂಟ್ಸ್) ಮತ್ತು ಯುವ ಆಟಗಾರ ಮೋನು ಗೋಯಟ್ (6 ಪಾಯಿಂಟ್ಸ್) ರೈಡಿಂಗ್ ಮೂಲಕ ಮಿಂಚಿದರು. ಇರಾನನ್ನು ಒಟ್ಟು ಎರಡು ಬಾರಿ ಆಲೌಟ್ ಮಾಡುವ ಮೂಲಕ ಭಾರತ ನಮ್ಮ ದೇಸೀ ಆಟ ಕಬಡ್ಡಿಯ ಸೊಗಡನ್ನು ಮೆರೆಯಿತು.
ಇತ್ತಂಡಗಳು 2016ರಲ್ಲಿ ಅಹ್ಮದಾಬಾದ್ ನಲ್ಲಿ ನಡೆದಿದ್ದ ವರ್ಲ್ಡ್ ಕಪ್ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲೂ ಠಾಕೂರ್ ಆಕರ್ಷಕ ಆಟ ಪ್ರದರ್ಶಿಸಿದ್ದರು. ಭಾರತ ಈ ವೇಳೆ 9 ಪಾಯಿಂಟ್ಸ್ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.