ಅಹಮದಾಬಾದ್, ಅಕ್ಟೋಬರ್. 08 : ವಿಶ್ವಕಪ್ ಕಬಡ್ಡಿ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಭಾರತ ಸೋಲು ಕಂಡಿದೆ. 32-34 ಅಂತರದಿಂದ ದಕ್ಷಿಣ ಕೊರಿಯಾಗೆ ಶರಣಾಯಿತು.
[ವಿಶ್ವಕಪ್ ಕಬಡ್ಡಿ 2016: ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ]
ಶುಕ್ರವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ಹಾಗೂ ದಕ್ಷಿಣ ಕೊರಿಯಾ ಪಂದ್ಯದಲ್ಲಿ ಭಾರತ ಆರಂಭದಿಂದಲೂ ಪ್ರಾಬಲ್ಯ ಹೊಂದಿತ್ತು. ಇನ್ನೇನು ಭಾರತದ ಗೆಲುವು ಖಚಿತವೆಂದೇ ಭಾವಿಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ದಕ್ಷಿಣ ಕೊರಿಯಾ ತೋರಿದ ಅಮೋಘ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು. ಕೊನೆಯ ಮೂರು ನಿಮಿಷದಲ್ಲಿ ಪ್ರವಾಸಿ ತಂಡದ ಆಟಗಾರರು ಫಲಿತಾಂಶವನ್ನೇ ಬದಲಿಸಿ ಹಾಲಿ ಚಾಂಪಿಯನ್ಸ್ ಗಳನ್ನು 32-34 ಅಂತರದಿಂದ ಮಣಿಸಿ ಸಂಭ್ರಮಿಸಿದರು. [ವಿಶ್ವಕಪ್ ಕಬಡ್ಡಿ : ಭಾರತದ ಪಂದ್ಯ ಯಾವಾಗ? ಎಲ್ಲಿ ಪ್ರಸಾರ?]
ಮೊದಲರ್ಧದ ಆಟ ಮುಗಿದಾಗ ಅನೂಪ್ ಕುಮಾರ್ ನಾಯಕತ್ವದ ಭಾರತ ತಂಡ 18-13ರಲ್ಲಿ ಮುನ್ನಡೆ ಹೊಂದಿತ್ತು. ಪ್ರಮುಖ ರೈಡರ್ ಗಳಾದ ಧರ್ಮರಾಜ್ ಚೇರಲಾತನ್ ಮತ್ತು ಮಂಜಿತ್ ಚಿಲಾರ ಅವರು ಗಮನಾರ್ಹ ಪ್ರದರ್ಶನ ನೀಡಿದರು.
ಚಿಲಾರ ಅವರ ಚುರುಕಿನ ಪ್ರದರ್ಶನದ ಬಲದಿಂದ ತಂಡ 22-15ರಲ್ಲಿ ಮುನ್ನಡೆ ಹೆಚ್ಚಿಸಿಕೊಂಡಿತು.ಪಂದ್ಯ ಮುಗಿಯಲು ಕೆಲ ನಿಮಿಷಗಳು ಬಾಕಿಯಿದ್ದಾಗ ಕೊರಿಯಾ ತಂಡ ಕಠಿಣ ಪೈಪೋಟಿ ಒಡ್ಡಿತು.
ಮೊದಲು ಹಿನ್ನಡೆಯನ್ನು 19-24ರಲ್ಲಿ ಕಡಿಮೆ ಮಾಡಿಕೊಂಡಿತು. ನಂತರ ಚುರುಕಿನ ರೈಡಿಂಗ್ ಮತ್ತು ರಕ್ಷಣಾ ವಿಭಾಗದಲ್ಲಿ ಗಮನ ಸೆಳೆದ ಆಟಗಾರರು ಹಿನ್ನಡೆಯನ್ನು 26-29ರಲ್ಲಿ ತಗ್ಗಿಸಿಕೊಂಡರು. ಪಂದ್ಯ ಮುಗಿಯಲು ಕೆಲ ನಿಮಿಷಗಳಷ್ಟೇ ಬಾಕಿಯಿದ್ದಾಗ 31-31ರಲ್ಲಿ ಪಂದ್ಯ ಸಮಬಲವಾಗಿತ್ತು.
ಇದರಿಂದ ಕಬಡ್ಡಿ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿತ್ತು. ಕೊನೆಯಲ್ಲಿ ರೈಡಿಂಗ್ ತೆರಳಿದ ದೀಪಕ್ ಹೂಡಾ ಎರಡು ಪಾಯಿಂಟ್ಗಳನ್ನು ಗಳಿಸಿ 33-31ರಲ್ಲಿ ಮುನ್ನಡೆ ತಂದುಕೊಟ್ಟರು.
ಆದರೆ ದಕ್ಷಿಣ ಕೋರಿಯಾದ ಜಾನ್ ಲೀ ಅವರ ಚುರುಕಿನ ಆಟಕ್ಕೆ ಭಾರತದ ಆಟಗಾರರು ಎದುರಾಳಿ ತಂಡಕ್ಕೆ ಪಾಯಿಂಟ್ಸ್ ಬಿಟ್ಟುಕೊಟ್ಟಿದ್ದು ಮುಳುವಾಯಿತು. ಭಾರತ ಎರಡನೇ ಪಂದ್ಯವನ್ನು ಆಸ್ಟ್ರೇಲಿಯ ವಿರುದ್ಧ ಅಕ್ಟೋಬರ್ 08 ರಂದು ಆಡಲಿದೆ.