
ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡು 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಾಂಗರೂಗಳ ವಿರುದ್ಧ ಸೆಣಸಾಟವನ್ನು ನಡೆಸಿದ್ದ ಶ್ರೀಲಂಕಾ 4 ಪಂದ್ಯಗಳಲ್ಲಿ ಹೀನಾಯವಾಗಿ ಸೋತು ಅಂತಿಮ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯನ್ನು 1-4 ಅಂತರದಲ್ಲಿ ಸೋತಿತ್ತು. ಹೀಗೆ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡು ಆಸ್ಟ್ರೇಲಿಯಾ ನೆಲದಲ್ಲಿ ಸೋತಿದ್ದ ಶ್ರೀಲಂಕಾ ಇದೀಗ ಭಾರತ ಪ್ರವಾಸವನ್ನು ಕೈಗೊಂಡಿದ್ದು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. ಇತ್ತ ಇತ್ತೀಚೆಗಷ್ಟೇ ಭಾರತ ಪ್ರವಾಸವನ್ನು ಕೈಗೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಎಲ್ಲಾ ಪಂದ್ಯಗಳನ್ನು ಕೂಡ ಗೆದ್ದು ಬೀಗಿ ವೈಟ್ ವಾಷ್ ಮಾಡಿರುವ ಟೀಮ್ ಇಂಡಿಯಾ ತವರಿನಲ್ಲಿ ಶ್ರೀಲಂಕಾಕ್ಕೆ ಮಣ್ಣುಮುಕ್ಕಿಸಲು ತಯಾರಾಗಿದೆ.
ಹೀಗೆ ಇತ್ತಂಡಗಳ ನಡುವೆ ಮೊದಲಿಗೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆಯಲಿದ್ದು ಪ್ರಥಮ ಪಂದ್ಯ ಫೆಬ್ರವರಿ 24ರಂದು ಲಕ್ನೋದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಎರಡೂ ತಂಡಗಳ ಆಟಗಾರರು ಈಗಾಗಲೇ ಲಕ್ನೋ ತಲುಪಿದ್ದು ಪಂದ್ಯಕ್ಕಾಗಿ ಭರ್ಜರಿ ತಯಾರಿಯನ್ನು ಕೂಡ ನಡೆಸುತ್ತಿದ್ದಾರೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಎರಡೂ ತಂಡಗಳಿಗೂ ಕೂಡ ಆಟಗಾರರ ಗಾಯದ ಸಮಸ್ಯೆ ಹಿನ್ನಡೆಯನ್ನುಂಟು ಮಾಡಿದೆ. ಇತ್ತ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಚಾಹರ್ ಗಾಯದ ಸಮಸ್ಯೆಗೆ ಒಳಗಾದ ಕಾರಣ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಅಲಭ್ಯರಾಗಿದ್ದಾರೆ, ಅತ್ತ ಶ್ರೀಲಂಕಾ ತಂಡದ ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ ಕೊರೋನಾವೈರಸ್ ಸೋಂಕಿನಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಪ್ರಥಮ ಟಿ ಟ್ವೆಂಟಿ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗೆ ತಂಡದ ಬಲಿಷ್ಠ ಆಟಗಾರನಾಗಿರುವ ವನಿಂದು ಹಸರಂಗ ಅಲಭ್ಯತೆ ಶ್ರೀಲಂಕಾ ತಂಡಕ್ಕೆ ಭಾರಿ ಹಿನ್ನಡೆಯನ್ನುಂಟು ಮಾಡಿತ್ತು.
ಇಷ್ಟು ಮಾತ್ರವಲ್ಲದೇ ಇದೀಗ ಶ್ರೀಲಂಕಾದ ಖ್ಯಾತ ಕ್ರೀಡಾ ಪತ್ರಕರ್ತ ರೆಕ್ಸ್ ಕ್ಲೆಮೆಂಟೈನ್ ಅವರು ಮಾಡಿರುವ ಟ್ವೀಟ್ ಪ್ರಕಾರ ಶ್ರೀಲಂಕಾದ ಮತ್ತಿಬ್ಬರು ಕ್ರಿಕೆಟಿಗರು ಭಾರತ ವಿರುದ್ಧದ ಪ್ರಥಮ ಟಿ ಟ್ವೆಂಟಿ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೌದು, ರೆಕ್ಸ್ ಕ್ಲೆಮೆಂಟೈನ್ ಮಾಡಿರುವ ಟ್ವೀಟ್ ಪ್ರಕಾರ ಶ್ರೀಲಂಕಾದ ಆಟಗಾರರಾದ ಕುಸಾಲ್ ಮೆಂಡಿಸ್ ಮತ್ತು ಮಹೀಶ್ ತೀಕ್ಷಣ ಭಾರತ ವಿರುದ್ಧ ನಡೆಯಲಿರುವ ಪ್ರಥಮ ಟಿ ಟ್ವೆಂಟಿ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಇಬ್ಬರೂ ಆಟಗಾರರು ಸಹ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಕುಸಾಲ್ ಮೆಂಡಿಸ್ ಭಾರತ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯಕ್ಕೂ ಕೂಡ ಅಲಭ್ಯರಾಗುವ ಸಾಧ್ಯತೆಗಳಿವೆ ಎಂದಿದ್ದಾರೆ. ಈ ಮೂಲಕ ಶ್ರೀಲಂಕಾದ ಒಟ್ಟು ಮೂವರು ಆಟಗಾರರು ಟೀಮ್ ಇಂಡಿಯಾ ವಿರುದ್ಧದ ಪ್ರಥಮ ಟಿ ಟ್ವೆಂಟಿ ಪಂದ್ಯಕ್ಕೆ ಅಲಭ್ಯರಾಗಲಿದ್ದು ತಂಡಕ್ಕೆ ಭಾರಿ ಹಿನ್ನಡೆಯುಂಟಾಗಿದೆ ಎಂದೇ ಹೇಳಬಹುದು.
ಶ್ರೀಲಂಕಾ ಟಿ 20 ಸ್ಕ್ವಾಡ್: ದಸುನ್ ಶನಕ - ನಾಯಕ, ಪಾತುಮ್ ನಿಸ್ಸಾಂಕ ಕುಸಲ್ ಮೆಂಡಿಸ್, ಚರಿತ್ ಅಸಲಂಕ - ಉಪನಾಯಕ, ದಿನೇಶ್ ಚಾಂಡಿಮಾಲ್, ದನುಷ್ಕ ಗುಣತಿಲಕ, ಕಾಮಿಲ್ ಮಿಶ್ರಾ, ಜನಿತ್ ಲಿಯಾನಗೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಲಹಿರು ಎಫ್ ಜೆಫ್ರೆನ್, ಜೆಫ್ರೆನ್ ಜಯರಾಯ್ ಕುಮಾರ
ಭಾರತ ಟಿ 20 ತಂಡ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವಿ ಜಡೇಜಾ, ಯುಜುವೇಂದ್ರ ಚಾಹಲ್, ಆರ್ ಬಿಷ್ಣೋಯ್, ಕುಲದೀಪ್, ಅವೇಶ್ ಖಾನ್