ಭಾರತದ ಮಹಿಳಾ ಕಬಡ್ಡಿ ತಂಡ ವಿಶ್ವಕಪ್ ಫೈನಲ್ನಲ್ಲಿ ಅಮೋಘ ಪ್ರದರ್ಶನ ನೀಡಿ, ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಢಾಕಾದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ 35-28 ಅಂಕಗಳಿಂದ ಚೈನೀಸ್ ತೈಪೆಯನ್ನು ಮಣಿಸಿ, ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುವ ಮೂಲಕ ಭಾರತದ ವನಿತೆಯರು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಮಹಿಳಾ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಭಾರತ ಅಜೇಯ ಓಟವನ್ನು ಮುಂದುವರೆಸಿದೆ. ಈ ಮೂಲಕ ಕಬಡ್ಡಿ ಕ್ರೀಡೆಯಲ್ಲಿ ತನ್ನ ಶಕ್ತಿಯನ್ನು ಮತ್ತೊಮ್ಮೆ ವಿಶ್ವದ ಮುಂದೆ ಪ್ರದರ್ಶಿಸಿದೆ. ಈ ಟೂರ್ನಿಯಲ್ಲಿ ಒಟ್ಟು ಹನ್ನೊಂದು ದೇಶಗಳು ಭಾಗವಹಿಸಿದ್ದರು. ಈ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಥೈಲ್ಯಾಂಡ್ (65-20), ಬಾಂಗ್ಲಾದೇಶ (43-18), ಜರ್ಮನಿ (63-22), ಉಗಾಂಡಾ (51-16) ತಂಡಗಳನ್ನು ಸೋಲಿಸಿ ಅಬ್ಬರಿಸಿತ್ತು. ಉಪಾಂತ್ಯ ಪಂದ್ಯದಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಇರಾನ್ ಅನ್ನು 33-21 ಅಂತರದಿಂದ ಸೋಲಿಸಿತ್ತು.

ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ ತಂಡದ ನಾಯಕಿ ರಿತು ನೇಗಿ ಗಾಯಕ್ಕೆ ತುತ್ತಾಗಿದ್ದರು. ಇವರು ಪಂದ್ಯದ 14ನೇ ನಿಮಿಷದಲ್ಲಿ ಗಾಯಗೊಂಡು ಮೈದಾನದಿಂದ ಹೊರ ನಡೆದರು. ಅವರಿಗೆ ಆದ ಗಾಯ ಗಂಭೀರವಾಗಿದೆ ಎಂದು ಶಂಕಿಸಲಾಗಿದೆ. ಇವರ ಆರೋಗ್ಯದ ಮೇಲೆ ವೈದ್ಯರು ಮೇಲ್ವಿಚರಾಣೆ ನಡೆಸುತ್ತಿದ್ದಾರೆ. ಇವರು ಗಾಯಕಕ್ಕೆ ತುತ್ತಾಗಿದ್ದರಿಂದ ಇವರ ಬದಲಿಗೆ ತಂಡದ ಉಪನಾಯಕಿ ಪುಷ್ಪಾ ಅವರು ಪ್ರಶಸ್ತಿಯನ್ನು ಪಡೆದರು.
ಸೋಮವಾರ ನಡೆದ ಪೈನಲ್ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತು. ಆರಂಭದಿಂದಲೂ ಆಕ್ರಮಣಕಾರಿ ಆಟವನ್ನು ಆಡಿದ ಭಾರತದ ವನಿತೆಯರು ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಶ್ರಮಿಸಿದರು. ಛತ್ತೀಸ್ಗಢದ ಸಂಜು, ಹರಿಯಾಣದ ಪೂಜಾ, ಹಿಮಾಚಲದ ಪುಷ್ಪಾ, ಮಹಾರಾಷ್ಟ್ರದ ಸೋನಾಲಿ ಅಂಕಗಳನ್ನು ಕಲೆ ಹಾಕುತ್ತಾ ಸಾಗಿದರು. ಈ ಆಟಗಾರರು ತಮ್ಮ ಚುರುಕಿನ ದಾಳಿಯಿಂದ ಅಂಕಗಳನ್ನು ಕಲೆ ಹಾಕಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಈ ಮೂಲಕ ಭಾರತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು.
ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ತಂಡವನ್ನು ಅಭಿನಂದಿಸಿದ್ದಾರೆ. ತಂಡ ಟೂರ್ನಿಯಲ್ಲಿ ಅದ್ಭುತವಾದ ಪ್ರದರ್ಶನ, ಧೈರ್ಯ, ಕೌಶಲ್ಯ ಮತ್ತು ಸಮರ್ಪಣಾ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಈ ವಿಜಯವು ಅಸಂಖ್ಯಾತ ಯುವಜನರಿಗೆ ಕಬಡ್ಡಿ ಕ್ರೀಡೆಯನ್ನು ಮುಂದುವರಿಸಲು ಪ್ರೇರಣೆ ಆಗಲಿದೆ ಎಂದು ಮೋದಿ ತಿಳಿಸಿದ್ದಾರೆ.