ಕನ್ನಡಿಗರ ಬಹುದಿನಗಳ ಆಸೆ ಫಲಿಸಿದೆ. ಬೆಂಗಳೂರು ಬುಲ್ಸ್ ತಂಡಕ್ಕೆ ಕನ್ನಡಿಗ ಕೋಚ್ ಆಗಬೇಕು ಎಂಬ ಕನ್ನಡಿಗರ ಕನಸು ನನಸಾಗಿದೆ. ಮುಂದಿನ ಬಾರಿ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ಬೆಂಗಳೂರು ತಂಡವನ್ನು ಕನ್ನಡದ ಖ್ಯಾತ ಕಬ್ಬಡಿ ಕೋಚ್ ಬಿಸಿ ರಮೇಶ್ ಮುನ್ನಡೆಸಲಿದ್ದಾರೆ. ಈಗಾಗಲೇ ಪ್ರೊ ಕಬಡ್ಡಿ ಲೀಗ್ನಲ್ಲಿ ಹಲವು ತಂಡಗಳಿಗೆ ಕೋಚ್ ಮಾಡಿರುವ, ಇವರು ಬುಲ್ಸ್ ತಂಡ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಲು ಶ್ರಮಿಸಲಿದ್ದಾರೆ. ಈ ಮೂಲಕ 11 ವರ್ಷಗಳಿಂದ ಕೋಚ್ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದಿಕೊಂಡಿದ್ದ ರಣಧೀರ್ ಸಿಂಗ್ ಸೆಹ್ರಾವತ್ ಬುಲ್ಸ್ ತಂಡದಿಂದ ಹೊರ ನಡೆದಿದ್ದಾರೆ.
ಬೆಂಗಳೂರು ಬುಲ್ಸ್ ತಂಡದ ನೂತನ ಕೋಚ್ ಆಗಿ ಬಿಸಿ ರಮೇಶ್ ಅವರು ಆಯ್ಕೆ ಆಗಿದ್ದಾರೆ. ಈ ವೇಳೆ ಮೈಖೇಲ್ ಅವರ ಜೊತೆ ಮಾತನಾಡಿದೆ. ಈ ವೇಳೆ ಅವರ ಯೋಜನೆಗಳು ಹಾಗೂ ಕನಸಿನ ಬಗ್ಗೆ ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ರಮೇಶ್ ಈಗಾಗಲೇ ಪ್ರೊ ಕಬಡ್ಡಿ ಲೀಗ್ನಲ್ಲಿ ಹಲವು ತಂಡಗಳನ್ನು ಮುನ್ನಡೆಸಿದ ಖ್ಯಾತಿಯನ್ನು ಹೊಂದಿದ್ದಾರೆ. ಇವರ ಮುಂದಾಳತ್ವದಲ್ಲಿ ಪುಣೇರಿ ಪಲ್ಟನ್ 10ನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈಗ ಇವರು ತಮ್ಮ ಅನುಭವವನ್ನು ಬೆಂಗಳೂರು ತಂಡಕ್ಕೆ ಧಾರೆ ಎರೆಯಲಿದ್ದಾರೆ.

ನಾವು ಸಹ ಯುವ ಆಟಗಾರರನ್ನು ಹುಡುಕುವತ್ತ ಚಿತ್ತ ನೆಟ್ಟಿದ್ದೇವೆ. ಯುವಕರೇ ನಮ್ಮ ಮೊದಲ ಟಾರ್ಗೆಟ್. ಇನ್ನು ಪ್ರೊ ಕಬಡ್ಡಿ ಹರಾಜಿನಲ್ಲಿ ಕರ್ನಾಟಕದ ಆಟಗಾರರು ಇದ್ದರೆ ಅವರನ್ನು ಸಹ ತಂಡ ಖರೀದಿಸುವ ಪ್ಲ್ಯಾನ್ ಹೊಂದಿದೆ.
ಇನ್ನು ಕರ್ನಾಟಕದಲ್ಲಿನ ಪ್ರತಿಭೆಯನ್ನು ಶೋಧಿಸುವ ಕಾರ್ಯ ನಡೆಯಲಿದೆ. ಪ್ರತಿಭಾವಂತ ಕಬ್ಬಡಿ ಆಟಗಾರ 20 ಜನರ ತಂಡವನ್ನು ರಚಿಸಿ ಅವರಿಗೆ ಅವಶ್ಯಕ ಇರುವ ಎಲ್ಲ ತರಬೇತಿ ನೀಡುವುದೇ ಇದರ ಗುರಿಯಾಗಿದೆ. ಯುವ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ನಾವು ಶೋಧಿಸಿದ ಆಟಗಾರರಲ್ಲಿ ಪ್ರತಿ ಬಾರಿ ಮೂರರಿಂದ ನಾಲ್ಕು ಜನರಿಗೆ ಅವಕಾಶ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಗ್ರಾಮೀಣ ಮಟ್ಟದ ಆಟಗಾರರನ್ನು ಸಹ ಗುರುತಿಸಿ ಅವರಿಗೆ ತರಬೇತಿ ನೀಡುವ ಆಲೋಚನೆ ನಮ್ಮದಾಗಿದೆ.
ಕಳೆದ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದಕ್ಕೆ, ಆಟಗಾರರು ಟೀಮ್ ಗೇಮ್ ಆಡಲಿಲ್ಲ. ಅಲ್ಲದೆ ಹರಾಜಿನಲ್ಲಿ ಒಳ್ಳೆಯ ಯುವ ಆಟಗಾರರನ್ನು ಖರೀದಿಸದೇ ಇರುವುದೇ ಹಿನ್ನಡೆ ಆಯಿತು.
ಯುವ ಪ್ರತಿಭೆಗಳಿಗೆ ಆದ್ಯತೆ ನೀಡುವದೇ ನಮ್ಮ ಟಾರ್ಗೆಟ್. ದಕ್ಷಿಣ ಭಾರತ ಹಾಗೂ ಕರ್ನಾಟಕದ ಪ್ರತಿಭಾವಂತ ಕಬಡ್ಡಿ ಕ್ರೀಡಾ ಪಟುಗಳನ್ನು ಶೋಧಿಸಿ ಒಂದೇ ಸೂರಿನಡಿ ಅವರಿಗೆ ಅಭ್ಯಾಸ ನೀಡುವುದು. ಅವರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಕೊಟ್ಟು, ಭವಿಷ್ಯಕ್ಕೆ ಆಸ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸುವುದು. ಪ್ರತಿಭಾನ್ವಿತ ಆಟಗಾರರಿಗೆ ವಿದ್ಯಾಭ್ಯಾಸ, ವಸತಿ, ಊಟ ಎಲ್ಲ ಸೌಲಭ್ಯ ನೀಡಿ, ಕಬಡ್ಡಿ ಆಟದಲ್ಲಿ ಬೆಳೆಸುವುದೇ ಗುರಿಯಾಗಿದೆ.
ಬೆಂಗಳೂರು ಬುಲ್ಸ್ ನೀಡಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು, ಪ್ರತಿಭಾನ್ವೇಷಣೆ ನಡೆಸಲಾಗುವುದು. ಯುವಕರ ಮುಖಾಂತರವೇ ಬೆಂಗಳೂರು ತಂಡವನ್ನು ಬಲಿಷ್ಠ ತಂಡವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಬೆಂಗಳೂರು ಬುಲ್ಸ್ ಅಭಿಮಾನಿಗಳಿಗೆ ಖುಷಿ ನೀಡುವಂತಹ ತಂಡ ಕಟ್ಟುವೆವು ಎಂದಿದ್ದಾರೆ.
ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾಗಿರುವ ಕೆ.ಗೋವಿಂದರಾಜು ಅವರು ಸಹ ಕಬ್ಬಡಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಕಂಠೀರವ್ ಕ್ರೀಡಾಂಗಣದಲ್ಲಿ ಬುಲ್ಸ್ ತಂಡದ ಅಭ್ಯಾಸಕ್ಕೆ ನೆರವು ಮಾಡಿ ನೀಡಲಾಗಿದೆ. ಇನ್ನು ಕಬಡ್ಡಿಗೆ ಪ್ರತೇಕ ಕ್ರೀಡಾಂಗಣ ಬೇಕು ಎಂದು ನಾವು ಮನವಿ ಮಾಡಿದ್ದೇವೆ. ಸರ್ಕಾರ ಸಹ ನಮ್ಮ ಮನವಿಗೆ ಸ್ಪಂದಿಸಿದೆ ಎಂದು ಬಿಸಿ ರಮೇಶ್ ತಿಳಿಸಿದ್ದಾರೆ.