ಭುವನೇಶ್ವರ, ಸೆಪ್ಟೆಂಬರ್. 20 : ಅಪಘಾತವೊಂದು ಉದಯೋನ್ಮುಖ ಕಬಡ್ಡಿ ಆಟಗಾರರನ್ನು ಬಲಿ ಪಡೆದಿದೆ. ಒಡಿಶಾದ ಸುಂದರ್ ಘಡ ಜಿಲ್ಲೆಯ ಬರಾಯಿಯಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಜನ ಕಬಡ್ಡಿ ಆಟಗಾರರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಪಂದ್ಯಾವಳಿಯೊಂದನ್ನು ಮುಗಿಸಿ ತವರಿಗೆ ವಾಪಸಾಗುತ್ತಿದ್ದ ಮಿನಿ ಟ್ರಕ್ ಸೇತುವೆಯೊಂದರ ಬಳಿ ಕಂದಕಕ್ಕೆ ಉರುಳಿದೆ. ಸ್ಥಳದಲ್ಲೇ 7 ಜನ ಸಾವನ್ನಪ್ಪಿದ್ದಾರೆ. ಗಂಭಿರ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಇನ್ನು 15 ಜನ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.[ಬೆಂಗಳೂರು ಬುಲ್ಸ್ ಮಣಿಸಿ ಯು ಮುಂಬಾ ಕಬಡ್ಡಿ ಸಾಮ್ರಾಟ]
ಮೃತರ ಕುಟುಂಬಗಳಿಗೆ 1 ಲಕ್ಷ ರು. ಪರಿಹಾರವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ಸಾವಿಗೀಡಾದವರನ್ನು ಅಭಿರಾಮ್ ಕಾಲೋ, ಧರಂದಿರ್ ನಾಯಕ್, ಚಂದ್ರ ಶೇಖರ್ ಪ್ರಧಾನ್, ಉಮೇಶ್ ಕಿಸಾನ್, ಗೌರಿ ದಂದ್ರ ಕಿಸಾನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸೆಂಧಾಪುರ್ ಮತ್ತು ಸಂಗೋಪಿನಾಥಪುರಕ್ಕೆ ಸೇರಿದವರು.