
ಮುಂಬೈ, ನವೆಂಬರ್ 14: ಮುಂಬೈಯಲ್ಲಿನ ಸರ್ದಾರ್ ವಲ್ಲಭ ಭಾಯ್ ಪಟೇಲ್ ಇಂಡೋರ್ ಸ್ಟೇಡಿಯಂನಲ್ಲಿ ಮಂಗಳವಾರ (ನವೆಂಬರ್ 13) ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಯುಪಿ ಯೋಧವನ್ನು 41-24 ಅಂತರದಿಂದ ಸೋಲಿಸಿ ಯು ಮುಂಬಾ ತಂಡ ತವರಿನಲ್ಲಿ ಎರಡನೇ ಗೆಲುವನ್ನಾಚರಿಸಿದೆ.
ದರ್ಶನ್ ಕಡಿಯಾನ್, ಸಿದ್ಧಾರ್ಥ್ ದೇಸಾಯಿ ಮತ್ತು ಸುರೀಂದರ್ ಸಿಂಗ್ ಅದ್ಭುತ ಆಟ ಮುಂಬೈಗೆ ಸುಲಭ ಗೆಲುವನ್ನು ನೀಡಿತು. ಮೂವರೂ ತಲಾ 7 ಅಂಕಗಳನ್ನು ತಂಡದ ಖಾತೆಗೆ ತುಂಬಿದರು. ಮುಂಬೈಯ ಮತ್ತೊಬ್ಬ ಸ್ಟಾರ್ ಆಟಗಾರ ಫಝಲ್ ಅಟ್ರಾಚಲಿ 6 ಅಂಕ ನೀಡಿ ತಂಡವನ್ನು ಬೆಂಬಲಿಸಿದರು.
ಯುಪಿ ಯೋಧ ಪರ ನರೇಂದರ್ ಮತ್ತು ಸಚಿನ್ ಕುಮಾರ್ ತಲಾ 5 ಅಂಕ ಸೇರಿಸಿದರಾದರೂ ತಂಡವನ್ನು ಗೆಲುವಿನತ್ತ ಎಳೆಯಲು ಸಾಧ್ಯವಾಗಲಿಲ್ಲ. ನಾಯಕ ರಿಶಾಂಕ್ ದೇವಾಡಿಗ ಆಟದ ಪ್ರಖರತೆ ಕಳೆದುಕೊಂಡಿದ್ದು, ತಂಡದ ಸೋಲಿಗೆ ಕಾರಣವಾಯ್ತು. ರಿಶಾಂಕ್ 2 ಅಂಕಗಳನ್ನಷ್ಟೇ ಸೇರಿಸಿದರು. ಪಂದ್ಯದ ಬಳಿಕ ಮುಂಬೈ ಝೋನ್ ಎ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಭದ್ರವಾಗಿದೆ.