
ಪುಣೆಯ ಬಾಲೆವಾಡಿಯಲ್ಲಿರುವ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಶುಕ್ರವಾರ ಅಕ್ಟೋಬರ್ 28 ರಂದು ನಡೆದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ತಮಿಳ್ ತಲೈವಾಸ್ ವಿಜಯ ಸಾಧಿಸಿದೆ. ತಮ್ಮ ಹೊಸ ಮುಖ್ಯ ಕೋಚ್ ಅಶನ್ ಕುಮಾರ್ ನೇತೃತ್ವದ ತಮಿಳ್ ತಲೈವಾಸ್ ತಂಡ ಸಾಕಷ್ಟು ಉತ್ಸಾಹದಲ್ಲಿ ಜಯ ಸಾಧಿಸಿತು.
ತಮಿಳ್ ತಲೈವಾಸ್ನ ನರೇಂದರ್ ಅದ್ಭುತ ಪ್ರದರ್ಶನ ನೀಡಿದರು. ಅವರು 13 ಅಂಕಗಳನ್ನು ಪಡೆಯುವ ಮೂಲಕ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ತಲೈವಾಸ್ 38-27 ಗೆಲುವು ದಾಖಲಿಸಲು ಸಹಾಯ ಮಾಡಿದರು.
ತಮಿಳ್ ತಲೈವಾಸ್ 6ನೇ ನಿಮಿಷದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಆಲ್ ಔಟ್ ಮಾಡಿ 12-1ರಲ್ಲಿ ಬೃಹತ್ ಮುನ್ನಡೆ ಸಾಧಿಸುವ ಮೂಲಕ ಭರ್ಜರಿ ಆರಂಭ ಪಡೆದರು. ವಿ ಅಜಿತ್ ಕುಮಾರ್ ಪ್ಯಾಂಥರ್ಸ್ ಪರ ಹೋರಾಡಲು ಪ್ರಯತ್ನಿಸಿದರು, ಆದರೆ ತಲೈವಾಸ್ ಡಿಫೆಂಡರ್ ಎಂ ಅಭಿಷೇಕ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ತಂಡ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು.
ತಮಿಳುನಾಡಿನ ತಂಡ 14ನೇ ನಿಮಿಷದಲ್ಲಿ ಅರ್ಜುನ್ ದೇಶ್ವಾಲ್ ಅವರನ್ನು ಟ್ಯಾಕಲ್ ಮಾಡಿ 17-5ರಲ್ಲಿ 12 ಅಂಕಗಳ ಮುನ್ನಡೆ ಸಾಧಿಸಿತು. ಮೊದಲಾರ್ಧದ ಅಂತ್ಯದಲ್ಲಿ ತಲೈವಾಸ್ 20-8 ರಲ್ಲಿ ಅದ್ಭುತ ಮುನ್ನಡೆ ಸಾಧಿಸಿತ್ತು. ಒಂದೆಡೆ ನರೇಂದರ್ ಅದ್ಭುತ ದಾಳಿ ಸಂಘಟಿಸಿದರೆ, ಮತ್ತೊಂದೆಡೆ ಡಿಫೆಂಡರ್ ಕೂಡ ಉತ್ತಮ ಪ್ರದರ್ಶನ ನೀಡಿದರು.

ಕೊನೆಯವರೆಗೂ ಪ್ರಾಬಲ್ಯ ಮೆರೆದ ತಮಿಳ್ ತಲೈವಾಸ್
ನರೇಂದರ್ ಸುನಿಲ್ ಕುಮಾರ್ ಅವರನ್ನು ಔಟ್ ಮಾಡಿದರು ಮತ್ತು ದ್ವಿತೀಯಾರ್ಧದ ಆರಂಭಿಕ ನಿಮಿಷಗಳಲ್ಲಿ ಮತ್ತೊಮ್ಮೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಆಲ್ ಔಟ್ ಮಾಡಲು ಸಹಾಯ ಮಾಡಿದರು. 28ನೇ ನಿಮಿಷದಲ್ಲಿ ತಲೈವಾಸ್ 27-11ರಲ್ಲಿ 16 ಅಂಕಗಳ ಮುನ್ನಡೆ ಸಾಧಿಸಿದ್ದರಿಂದ ಡಿಫೆಂಡರ್ ಹಿಮಾಂಶು ಕೂಡ ತಂಡಕ್ಕೆ ಸೇರ್ಪಡೆಯಾದರು.
ಜೈಪುರ್ ಪಿಂಕ್ ಪ್ಯಾಂಥರ್ಸ್ನ ದೇಶ್ವಾಲ್ ಅದ್ಭುತ ದಾಳಿ ನಡೆಸಿದರು, ಆದರೆ ಪ್ಯಾಂಥರ್ಸ್ ಸತತವಾಗಿ ಪಾಯಿಂಟ್ಗಳನ್ನು ಪಡೆಯುವ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ನರೇಂದರ್ ದಾಳಿಗಳನ್ನು ಮುಂದುವರಿಸಿದರು, 35ನೇ ನಿಮಿಷದಲ್ಲಿ ತಲೈವಾಸ್ 32-16ರಲ್ಲಿ ಪ್ರಾಬಲ್ಯ ಮೆರೆಯಿತು.
ಪ್ಯಾಂಥರ್ಸ್ 37ನೇ ನಿಮಿಷದಲ್ಲಿ ಆಲ್ ಔಟ್ ಆದರು, ಆದರೆ ತಮಿಳು ತಂಡವು 32-23ರಲ್ಲಿ ದೊಡ್ಡ ಮುನ್ನಡೆ ಕಾಯ್ದುಕೊಂಡಿತು.ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡಿದ ತಮಿಳ್ ತಲೈವಾಸ್ ಅಂತಿಮವಾಗಿ 38-27 ರಲ್ಲಿ ಗೆಲುವು ಸಾಧಿಸಿ ಸಂಭ್ರಮಿಸಿತು.