

ಬೆಂಗಳೂರು, ಜೂ 1: ಪ್ರೊ ಕಬಡ್ಡಿ ಲೀಗ್ 2018ರ ಆವೃತ್ತಿಯ ಹರಾಜು ಪ್ರಕ್ರಿಯೆ ಮುಗಿದು ಆಟಗಾರರ ಅಂತಿಮ ಪಟ್ಟಿಯೂ ತಯಾರಾಗಿದ್ದಾಯಿತು. ಕನ್ನಡದ ಕಬಡ್ಡಿ ಪ್ರತಿಭೆಗಳು ಯಾವ ತಂಡದಲ್ಲಿದ್ದಾರೆ, ಎಷ್ಟು ಬೆಲೆಗೆ ಮಾರಾಟವಾಗಿದ್ದಾರೆ ಎಂಬ ಕುತೂಹಲ ಸಹಜ. ಈ ಕುತೂಹಲದ ಬೆನ್ನು ಬಿದ್ದು ಹೋದರೆ ನಮಗೆ ಕನ್ನಡ ನೆಲದ ಮೂವರು ಆಟಗಾರರು ಸಿಕ್ಕುತ್ತಾರೆ.
ಈ ಬಾರಿ ಮೂವರು ಕನ್ನಡಿಗರು ಪಿಕೆಎಲ್ ಹರಾಜಿನಲ್ಲಿ ಗಮನ ಸೆಳೆದಿದ್ದು, ಸುಕೇಶ್ ಹೆಗ್ಡೆ, ಜೆ. ದರ್ಶನ್ ಮತ್ತು ಜೀವಾ ಕುಮಾರ್ ಈ ಮೂವರ ಹೆಸರುಗಳು.
ಕನ್ನಡಿಗರಲ್ಲಿ ಈ ಬಾರಿ ಅತೀ ಹೆಚ್ಚಿನ ಮೊತ್ತಕ್ಕೆ ಪಾತ್ರವಾದ ಕೀರ್ತಿ ಜೀವಾ ಕುಮಾರ್ ಅವರಿಗೆ ಸಲ್ಲುತ್ತದೆ. ಮೈಸೂರು ಮೂಲದ ಜೀವಾ ಕುಮಾರ್ 45 ಲಕ್ಷ ರೂ. ಯೂಪಿ ಯೋಧಾ ಪಾಲಾಗಿದ್ದಾರೆ. ಪಿಕೆಎಲ್ ನಲ್ಲಿ ಒಳ್ಳೆಯ ಮೊತ್ತಕ್ಕೆ ಪಾಲಾಗಿ ಗಮನ ಸೆಳೆದಿದ್ದಾರೆ ಜೀವ.
ಮಂಗಳೂರು ಮೂಲದ ಸುಕೇಶ್ ಹೆಗ್ಡೆ 28 ಲಕ್ಷ ರೂ. ಗೆ ತಮಿಳ್ ತಲೈವಾ ಪಾಲಾಗಿದ್ದಾರೆ. ಮತ್ತೊಬ್ಬ ಆಟಗಾರ ಜೆ. ದರ್ಶನ್ ಅವರೂ 28 ಲಕ್ಷಕ್ಕೆ ತಮಿಳ್ ತಲೈವಾಸ್ ಗೆ ಮಾರಾಟವಾಗಿದ್ದಾರೆ.
ಅಂತೂ ಮೂವರು ಕರ್ನಾಟಕ ಆಟಗಾರರೂ ಒಳ್ಳೆಯ ಮೊತ್ತಕ್ಕೆ ಹರಾಜಾಗಿದ್ದಾರೆ. ಒಟ್ಟಿನಲ್ಲಿ 25 ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದು ಕನ್ನಡ ಕ್ರೀಡಾಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಪಿಕೆಎಲ್ ನಲ್ಲಿ ಮೂರೂ ಕನ್ನಡಿಗರು ಮಿಂಚಲಿ ಅಂತ ಮನಸಾರೆ ಹಾರೈಸೋಣ.