
ಚೆನ್ನೈ, ಅಕ್ಟೋಬರ್ 11: ಚೆನ್ನೈ ನಲ್ಲಿ ನಡೆದ ಪ್ರೊ ಕಬಡ್ಡಿ 10ನೇ ಪಂದ್ಯದಲ್ಲಿ ಗುರುವಾರ (ಅಕ್ಟೋಬರ್ 11) ತಮಿಳ್ ತಲೈವಾಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ ತಂಡ 36-27ರ ಗೆಲುವು ಸಾಧಿಸಿತು. ಈ ಸೋಲಿನೊಂದಿಗೆ ತಲೈವಾಸ್ ಪ್ರಶಸ್ತಿ ಕನಸು ಬಹುತೇಕ ಮಬ್ಬಾಗಿದೆ.
ಪಂದ್ಯಾರಂಭದಲ್ಲಿ ತಮಿಳ್ ತಲೈವಾಸ್ ಮುನ್ನಡೆಯೊಂದಿಗೆ ಉತ್ತಮ ಆಟವನ್ನೇ ಪ್ರದರ್ಶಿಸಿತು. ಸತತ ಮೂರು ಸೋಲುಗಳನ್ನು ಕಂಡಿದ್ದರಿಂದ ಇಂದಿನ ಗೆಲುವು ತಲೈವಾಸ್ ಗೆ ಅನಿವಾರ್ಯವೂ ಆಗಿತ್ತು. ಆದರೆ ವಾರಿಯರ್ಸ್ ಪಂದ್ಯ ಬಿಟ್ಟುಕೊಡಲಿಲ್ಲ. ಪಂದ್ಯ ಸಾಗಿದಂತೆಲ್ಲ ಅಂಕದ ಬೆನ್ನಿಗೆ ಬಿದ್ದ ವಾರಿಯರ್ಸ್ ಮುನ್ನಡೆ ಸಾಧಿಸುತ್ತಾ ಹೋಯಿತು.
ಟೂರ್ನಿಯ ಆರಂಭಿಕ ಪಂದ್ಯಲ್ಲಿ ತಮಿಳ್ ತಲೈವಾಸ್ ತಂಡ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ 42-26ರ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಅದೇ ಕೊನೆ, ಅನಂತರ ಟೂರ್ನಿಯಲ್ಲಿ ತಲೈವಾಸ್ ಗೆ ಒಂದೂ ಗೆಲುವು ದಕ್ಕಿಲ್ಲ. ತಮಿಳ್ ತಂಡ ಕ್ರಮವಾಗಿ ಯುಪಿ ಯೋಧ, ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ಎದುರು ಸೋತಿತ್ತು. ಇದೀಗ ಮತ್ತೆ ತಲೈವಾಸ್ ಗೆ ಸೋಲಾಗಿದೆ.