
ಪುಣೆ, ನವೆಂಬರ್ 29: ಪುಣೆಯ ಶ್ರೀ ಶಿವ್ ಛತ್ರಪತಿ ರಸ್ಲಿಂಗ್ ಹಾಲ್ ನಲ್ಲಿ ಗುರುವಾರ ನಡೆದ (ನವೆಂಬರ್ 29) ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಎದುರು ಬೆಂಗಳೂರು ಬುಲ್ಸ್ 37-44 ಅಂತರದಿಂದ ಸೋಲೊಪ್ಪಿಕೊಂಡಿತು.
ಬೆಂಗಾಲ್ ವಾರಿಯರ್ಸ್ ಪರ ಮಣೀಂದರ್ ಸಿಂಗ್ ಗೆಲುವಿನ ರುವಾರಿ ಎನಿಸಿದರು. ಮಣೀಂದರ್, 15 ರೈಡಿಂಗ್ ಮತ್ತು 2 ಬೋನಸ್ ಸೇರಿ ಒಟ್ಟು ಭರ್ಜರಿ 17 ಅಂಕ ಸೇರಿಸಿದ್ದೇ ಬೆಂಗಾಲ್ ಬೆಂಗಾವಲಿಗೆ ನಿಂತಿತು. ರವೀಂದ್ರ ರಮೇಶ್ ಕೂಡ ತಂಡಕ್ಕೆ 8 ಅಂಕದ ಕೊಡುಗೆ ನೀಡಿದರು.
ಬೆಂಗಳೂರು ಪರ ರೋಹಿತ್ ಕುಮಾರ್ ಮತ್ತು ಹರೀಶ್ ನಾಯ್ಕ್ ಉತ್ತಮ ಆಟ ಪ್ರದರ್ಶಿಸಿದರು. ಇಬ್ಬರೂ ತಲಾ 9 ಅಂಕಗಳನ್ನು ತಂಡದ ಖಾತೆಗೆ ಸೇರಿಸಿದರು. ಆದರೆ ಇಡೀ ತಂಡದ ಬೆಂಬಲ ಬೆಂಗಳೂರಿಗೆ ಸಾಲಲಿಲ್ಲ. ಬೆಂಗಳೂರು ಕೊನೆಗೂ 5ನೇ ಸೋಲನ್ನು ಒಪ್ಪಿಕೊಂಡಿತು. ಮತ್ತೊಂದು ಪಂದ್ಯದಲ್ಲಿ ಗುಜರಾತ್ ತಂಡ ಪುಣೆಯನ್ನು 35-20ರಿಂದ ಮಣಿಸಿತು.