
ಮುಂಬೈ, ನವೆಂಬರ್ 12: ಮುಂಬೈನಲ್ಲಿನ ಸರ್ದಾರ್ ವಲ್ಲಭ ಭಾಯ್ ಪಟೇಲ್ ಇಂಡೋರ್ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 11) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ಮುಂಬೈಯನ್ನು ಹರ್ಯಾಣ ಸ್ಟೀಲರ್ಸ್ ತಂಡ 35-31ರ ಅಂತರದಿಂದ ಸೋಲಿಸಿದೆ.
ಹರ್ಯಾಣ ಪರ ವಿಕಾಶ್ ಖಂಡೋಲ 13 ರೈಡಿಂಗ್ ಮತ್ತು 2 ಬೋನಸ್ ಸೇರಿ 15 ಅಂಕ ಸೇರಿಸಿದ್ದು ತಂಡದ ಗೆಲುವನ್ನು ಬರೆಯಿತು. ಜೊತೆಗೆ ಸುನಿಲ್, ನವೀನ್ ಕೂಡ ತಲಾ 5 ಅಂಕಗಳನ್ನು ನೀಡಿ ತಂಡವನ್ನು ಬೆಂಬಲಿಸಿದರು. ಯು ಮುಂಬಾ ಪರ ಸಿದ್ಧಾರ್ಥ್ ದೇಸಾಯ್ ಹೋರಾಟ ನಡೆಸಿದರಾದರೂ ಗೆಲುವನ್ನು ತಂದುಕೊಡಲಾಗಲಿಲ್ಲ.
ಪಂದ್ಯದಿಂದ ಮುಂಬೈಗೆ ಅಂಥದ್ದೇನೂ ನಷ್ಟವಾದಂತೆ ಕಾಣಲಿಲ್ಲ. ಯಾಕೆಂದರೆ ಝೋನ್ ಎಯಲ್ಲಿರುವ ಮುಂಬೈ ಈಗಾಗಲೇ ಒಟ್ಟು 41 ಅಂಕಗಳಿಸಿ ಪಾಯಿಂಟ್ ಟೇಬಲ್ ನಲ್ಲಿ ಅಗ್ರ ಸ್ಥಾನದಲ್ಲಿದೆ. ಇದಕ್ಕೂ ಮುನ್ನ ದಬಾಂಗ್ ಡೆಲ್ಲಿ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಣ ಕಾಳಗದಲ್ಲಿ ಡೆಲ್ಲಿ 40-26ರ ಭರ್ಜರಿ ಗೆಲುವನ್ನಾಚರಿಸಿತ್ತು.