ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ಹಿಂದಿನಿಂದ ಅದ್ಭುತವಾದ ಪ್ರದರ್ಶನ ನೀಡಿ ತಮಿಳು ತಲೈವಾಸ್ ತಂಡವನ್ನು ಮಣಿಸಿತು. ಈ ಪಂದ್ಯದಲ್ಲಿ ನಾಯಕ ಮಣಿಂದರ್ ಸಿಂಗ್ 16 ಅಂಕ ಗಳಿಸಿದ ಪರಿಣಾಮ, 48-38 ಅಂಕಗಳ ಅಂತರದಿಂದ ವಾರಿಯರ್ಸ್ ಗೆಲುವು ಸಾಧಿಸಿದರು.
ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಬೆಂಗಾಲ್ ವಾರಿಯರ್ಸ್ ತನ್ನ ಅಜೇಯ ಓಟವನ್ನು ಮುಂದುವರೆಸಿದ್ದು, 13 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ತಮಿಳು ತಲೈವಾಸ್ ಒಂಬತ್ತನೇ ಸ್ಥಾನದಲ್ಲಿದೆ.

ಪಂದ್ಯದ ಮೂರನೇ ನಿಮಿಷದಲ್ಲಿಯೇ ನರೇಂದ್ರ ಅವರನ್ನು ಟ್ಯಾಕಲ್ ಮಾಡುವ ಮೂಲಕ ಬೆಂಗಾಲ್ 6-3 ರಿಂದ ಅದ್ಭುತ ಮುನ್ನಡೆ ಸಾಧಿಸಿತು. ಇದಾದ ಬಳಿಕ ತಲೈವಾಸ್ ಮೇಲೆ ಒತ್ತಡ ಹೇರಿದ ವಾರಿಯರ್ಸ್ ಅಂತಿಮವಾಗಿ 7ನೇ ನಿಮಿಷದಲ್ಲಿ ಆಲೌಟ್ ಮಾಡುವ ಮೂಲಕ ಮುನ್ನಡೆಯನ್ನು ಬಲಪಡಿಸಿಕೊಂಡಿತು.
ಇದಾದ ಬಳಿಕ ಭರ್ಜರಿ ಪ್ರದರ್ಶನವನ್ನು ನೀಡಿದ ತಲೈವಾಸ್ ಭರ್ಜರಿ ರೇಡ್ ಹಾಗೂ ಟ್ಯಾಕಲ್ ಮಾಡಿ ಅಂಕಗಳನ್ನು ಬಾಚಿಕೊಂಡಿತು. ಈ ಹಂತದಲ್ಲಿ ಬೆಂಗಾಲ್ ತಂಡದ ಅಂಗಳ ಸಹ ಒಮ್ಮೆ ಖಾಲಿ ಆಯಿತು.

ಆದರೆ 13ನೇ ನಿಮಿಷದಲ್ಲಿ ವಾರಿಯರ್ಸ್ ಮತ್ತೆ 16-15ರಿಂದ ಮುನ್ನಡೆ ಸಾಧಿಸಿತು. ತಲೈವಾಸ್ ಕೂಡ ಹಿಂದೆ ಬೀಳಲಿಲ್ಲ ಮತ್ತು 15 ನೇ ನಿಮಿಷದಲ್ಲಿ 18-17 ಒಂದು ಪಾಯಿಂಟ್ನ ಮುನ್ನಡೆ ಪಡೆಯಿತು. ಇದಾದ ಬಳಿಕ ಉಭಯ ತಂಡಗಳು ಮುನ್ನಡೆ ಕಾಯ್ದುಕೊಂಡವು. ನಂತರ ತಲೈವಾಸ್ ವಿರಾಮದ ಮೊದಲು 27-21 ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧದ ಆರಂಭಿಕ ನಿಮಿಷಗಳಲ್ಲಿ ತಲೈವಾಸ್ ಮತ್ತು ವಾರಿಯರ್ಸ್ ರಕ್ಷಣಾತ್ಮಕ ಆಟವಾಡಿದವು. ಈ ಅವಧಿಯಲ್ಲಿ ಮಣಿಂದರ್ ಸಿಂಗ್ ಸೂಪರ್ ರೈಡ್ ಮಾಡಿ ತಂಡಕ್ಕೆ ಆಧಾರವಾದರು. ವಾರಿಯರ್ಸ್ 29 ನೇ ನಿಮಿಷದಲ್ಲಿ ತಮಿಳ್ ತಲೈವಾಸ್ ಅನ್ನು ಆಲೌಟ್ ಮಾಡಿ 31-29 ಮುನ್ನಡೆ ಸಾಧಿಸಿತು.

ಇಲ್ಲಿಂದ ಮಣಿಂದರ್ ಸಿಂಗ್ ರೇಡ್ ನಲ್ಲಿ ಪಾಯಿಂಟ್ಸ್ ಪಡೆಯುವುದನ್ನು ಮುಂದುವರಿಸಿದರು. 35ನೇ ನಿಮಿಷದಲ್ಲಿ ತಲೈವಾಸ್ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡಿದ ಬೆಂಗಾಲ್ 41-33 ಅಂತರದಲ್ಲಿ ಮುನ್ನಡೆ ಸಾಧಿಸಿತು. ಇದಾದ ಬಳಿಕ ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡ ಬೆಂಗಾಲ್ ವಾರಿಯರ್ಸ್ 10 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು.
ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ 35-33ರಿಂದ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಹರಿಯಾಣ ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು. ಎರಡನೇ ಪಂದ್ಯ ಸೋತ ಡೆಲ್ಲಿ ಏಳನೇ ಸ್ಥಾನದಲ್ಲಿದೆ.