ಭಾನುವಾರ ನಡೆದ ಪ್ರೋ ಕಬಡ್ಡಿ ಲೀಗ್ನ 11ನೇ ಆವೃತ್ತಿಯ 19ನೇ ಪಂದ್ಯವು ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ತಮಿಳ್ ತಲೈವಾಸ್ ನಡುವೆ ನಡೆಯಿತು. ಉಭಯ ತಂಡಗಳ ಪಂದ್ಯ ಭಾರೀ ರೋಚಕತೆಯಿಂದ ಕೂಡಿತ್ತು. ಜೈಪುರ ಮತ್ತು ತಲೈವಾಸ್ ತಂಡಗಳು ತಲಾ 30 ಅಂಕ ಗಳಿಸಿ ಸಮಬಲ ಸಾಧಿಸಿದವು.
ತಮಿಳ್ ತಲೈವಾಸ್ ವಿರುದ್ಧ ಪಂದ್ಯವನ್ನು ಜೈಪುರ ಸುಲಭವಾಗಿ ಗೆಲ್ಲುವಂತಿತ್ತು. ಆದರೆ ಸಚಿನ್ ತನ್ವಾರ್ ತಮ್ಮ ರೇಡಿಂಗ್ ಮತ್ತು ಡಿಫೆನ್ಸ್ನಿಂದ ಪಂದ್ಯದ ಗತಿಯನ್ನು ಬದಲಾಯಿಸಿದರು. ತಮಿಳ್ ತಲೈವಾಸ್ ಪರ ನರೇಂದ್ರ ಕಾಂಡೋಲ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ.

ತಲೈವಾಸ್ ಪರ ಸಚಿನ್ ತನ್ವಾರ್ 11 ಅಂಕಗಳನ್ನು ಬೇಟೆ ಆಡುವ ಮೂಲಕ ಪಂದ್ಯ ಡ್ರಾ ಆಗಲು ಕಾರಣವಾದರು. ಇತ್ತ ಜೈಪುರ ತಂಡದ ಎಲ್ಲ ಆಟಗಾರರು ಉತ್ತಮ ಸಂಘಟಿತ ಪ್ರದರ್ಶನ ನೀಡಿದರು. ಅರ್ಜುನ್ ದೇಶ್ವಾಲ್ 7 ಅಂಕ, ವಿಕಾಸ್ ಕಾಂಡೋಲಾ 6, ಅಂಕುಶ್ ರಾಠಿ, ಸುರ್ಜೆತ್ ಸಿಂಗ್ ಮತ್ತು ರೆಜಾ ಮಿರ್ಬಘೇರಿ ತಲಾ 3 ಅಂಕಗಳನ್ನು ಪಡೆದರು.
ಮೊದಲ 10 ನಿಮಿಷಗಳಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಅದ್ಭುತ ಪ್ರದರ್ಶನ ನೀಡಿ ತಮಿಳ್ ತಲೈವಾಸ್ ತಂಡವನ್ನು ಆಲೌಟ್ ಮಾಡಿತು. ವಿಕಾಸ್ ಕಾಂಡೋಲ ಅಂಕಗಳ ಬೇಟೆ ಆಡುವ ಮೂಲಕ ಜೈಪುರ ಮುನ್ನಡೆ ಸಾಧಿಸಲು ನೆರವಾದರು. ಕಳೆದ ಎರಡು ಪಂದ್ಯಗಳಲ್ಲಿ ಅವರಿಂದ ಉತ್ತಮ ಪ್ರದರ್ಶನ ಮೂಡಿ ಬಂದಿರಲಿಲ್ಲ. ಮೊದಲಾರ್ಧದಲ್ಲಿ ಜೈಪುರ ತಂಡ 21-16 ರಲ್ಲಿ ಮುನ್ನಡೆ ಸಾಧಿಸಿತು.
ದ್ವಿತಿಯಾರ್ಧದಲ್ಲಿಯೂ ತಮಿಳ್ ತಲೈವಾಸ್ ಮಂಕಾಗಿತ್ತು. ತಂಡದ ಸ್ಟಾರ್ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ. ಸಚಿನ್ ತನ್ವಾರ್ ಮಾತ್ರ ತಮ್ಮ ಮಿಂಚಿನ ರೈಡಿಂಗ್ ಮೂಲಕ ಅಂಕಗಳ ಬೇಟೆಯಾಡಿದರು. ಇದರೊಂದಿಗೆ ಜೈಪುರ ಕಡೆ ಇದ್ದ ಪಂದ್ಯವನ್ನು ಸಚಿನ್ ಉಲ್ಟಾ ಮಾಡಿದರು. ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.
ಭಾನುವಾರ ನಡೆದ ಪ್ರೋ ಕಬಡ್ಡಿ ಲೀಗ್ನ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ಯೋಧಾಸ್ ಭರ್ಜರಿ ಗೆಲುವು ಸಾಧಿಸಿದೆ. ಗುಜರಾತ್ ಜೈಂಟ್ಸ್ ತಂಡವನ್ನು ಯುಪಿ ಯೋಧಾಸ್ 35-29 ಅಂಕಗಳ ಅಂತರದಲ್ಲಿ ಸೋಲಿಸಿದೆ.
ಈ ಗೆಲುವಿನ ನಂತರ ಪ್ರೋ ಕಬಡ್ಡಿ ಅಂಕಪಟ್ಟಿಯಲ್ಲಿ ಯುಪಿ ಯೋಧಾಸ್ 2ನೇ ಸ್ಥಾನವನ್ನು ಉಳಿಸಿಕೊಂಡಿದೆ. ಇತ್ತ ಗುಜರಾತ್ 8ನೇ ಸ್ಥಾನಕ್ಕೆ ಕುಸಿದಿದೆ. ಆರಂಭದಿಂದಲ್ಲೇ ಯುಪಿ ಯೋಧಾಸ್ ತಂಡ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿತು. ಇದಕ್ಕೆ ಗುಜರಾತ್ ಜೈಂಟ್ಸ್ ಕಡೆಯಿಂದ ಉತ್ತಮ ಪ್ರತಿರೋಧ ಕೂಡ ಬಂತು. ಆದರೆ ಅಂಕಗಳ ಬೇಟೆಯಲ್ಲಿ ಗುಜರಾತ್ ಹಿಂದೆಯುಳಿತು.