10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿತು. ಮುಂಬೈನ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ 46-26 ರಿಂದ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು.
ಈ ಗೆಲುವಿನೊಂದಿಗೆ ಬೆಂಗಾಲ್ ವಾರಿಯರ್ಸ್ ಆಡಿದ 11 ಪಂದ್ಯಗಳಲ್ಲಿ 4 ಜಯ, 5 ಸೋಲು, 2 ಡ್ರಾ ಸಾಧಿಸಿದ್ದು, 28 ಅಂಕಗಳೊಂದಿಗೆ 9ನೇ ಸ್ಥಾನವನ್ನು ಪಡೆದಿದೆ. ಇನ್ನು ತೆಲುಗು ಟೈಟಾನ್ಸ್ ಎರಡನೇ ಗೆಲುವಿನ ಹುಡುಕಾಟ ಮುಂದುವರೆದಿದೆ.

ಮೊದಲಾವಧಿಯ ಆಟದಿಂದಲೂ ಬೆಂಗಾಲ್ ವಾರಿಯರ್ಸ್ ಭರ್ಜರಿ ಪ್ರದರ್ಶನ ನೀಡಿತು. ಆರಂಭದಿಂದಲೂ ಅಂಕಗಳ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ತೆಲುಗು ಟೈಟನ್ಸ್ ತಂಡದ ಸ್ಟಾರ್ ಆಟಗಾರ ಪವನ್ ಶೇರವಾತ್ ಅವರನ್ನು ಕಟ್ಟಿ ಹಾಕಿದ ಬೆಂಗಾಲ್ ವಾರಿಯರ್ಸ್ ಸುಲಭವಾಗಿ ಎದುರಾಳಿ ತಂಡಕ್ಕೆ ಅಂಕಗಳನ್ನು ನೀಡಲಿಲ್ಲ. ಈ ಅವಧಿಯಲ್ಲಿ ಬೆಂಗಲಾ ತಂಡದ ರಕ್ಷಣಾತ್ಮಕ ಆಟ ಮನಮೋಹಕವಾಗಿತ್ತು.
ಮೊದಲಾವಧಿಯ 7ನೇ ನಿಮಿಷದಲ್ಲೇ ಬೆಂಗಾಲ್ ತಂಡದ ಎದುರಾಳಿ ತಂಡದ ಅಂಗಳವನ್ನು ಖಾಲಿ ಮಾಡಿತು. ಈ ಹಂತದಲ್ಲಿ ತೆಲುಗು ಪುನರಾಗಮನ ಮಾಡುವ ಆಸೆಯನ್ನು ಹೊಂದಿತ್ತು. ಆದರೆ ಬೆಂಗಾಲ್ ಉತ್ತಮ ರಣತಂತ್ರದೊಂದಿಗೆ ಎದುರಾಳಿ ಆಟಗಾರರನ್ನು ಕಟ್ಟಿ ಹಾಕಿ ಅಬ್ಬರಿಸಿತು. ಪರಿಣಾಮ ಈ ಅವಧಿಯ ಕೊನೆಯ ಕ್ಷಣದಲ್ಲಿ ಮತ್ತೊಮ್ಮೆ ತೆಲುಗು ತಂಡದ ಅಂಗಳ ಖಾಲಿ ಆಯಿತು.
ಎರಡನೇ ಅವಧಿಯಲ್ಲಿ ಬೆಂಗಾಲ್ ವಾರಿಯರ್ಸ್ ಆಟವನ್ನು ಅರಿತು ಆಡಿದ ತೆಲುಗು ಅಂಕದ ಬೇಟೆಯಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಆಸೆಯನ್ನು ಹೊಂದಿತ್ತು. ಇದಕ್ಕೆ ಪೂರಕವಾಗಿ ಸ್ಟಾರ್ ಆಟಗಾರ ಪವನ್ ಶೇರಾವತ್ ಭರ್ಜರಿ ರೈಡ್ ನಡೆಸಿ ತಂಡಕ್ಕೆ ಮುನ್ನಡೆ ತಂಡಕ್ಕೆ ನೆರವಾದರು. ಈ ಅವಧಿಯ 14ನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ ಅಂಗಳವನ್ನು ಖಾಲಿ ಮಾಡಿತು. ಇದರಿಂದ ತೆಲುಗು ತಂಡದ ಆಸೆ ಚಿಗುರಿತು.

ಕೊನೆಯ ಕ್ಷಣದಲ್ಲಿ ಬೆಂಗಾಲ್ ಸ್ಥಿರ ಪ್ರದರ್ಶನವನ್ನು ನೀಡಿ ತೆಲುಗು ತಂಡಕ್ಕೆ ಖೆಡ್ಡಾ ತೋಡಿತು. ಪರಿಣಾಮ ತೆಲುಗು ತಂಡದ ಅಂಗಳ ಮತ್ತೊಮ್ಮೆ ಖಾಲಿ ಆಯಿತು.
ಇನ್ನು ತೆಲುಗು ತಂಡದ ಸ್ಟಾರ್ ಆಟಗಾರ ಪವನ್ ಶೇರವಾತ್ಗೆ ಅರ್ಜುನ್ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಪಡೆದ ದಿನದಂದೇ ಪವನ್ ಭರ್ಜರಿ ಪ್ರದರ್ಶನ ನೀಡಿ 11 ಅಂಕಗಳನ್ನು ಕಲೆ ಹಾಕಿ ಮಿಂಚಿದರು.