
ಹೈದರಾಬಾದ್, ಜುಲೈ 21: ಬಹು ಬಾರಿಯ ಚಾಂಪಿಯನ್ಸ್ ಪಟನಾ ಪೈರೇಟ್ಸ್ ತಂಡವನ್ನು ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಬಗ್ಗು ಬಡಿದು ಶುಭಾರಂಭ ಮಾಡಿದ್ದ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ತಂಡ, ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜಯಂಟ್ಸ್ ಎದುರು ಮಣ್ಣು ಮುಕ್ಕಿದೆ.
ಕಳೆದ ವರ್ಷ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿದ್ದ ಬೆಂಗಳೂರು ತಂಡ, ಇಲ್ಲಿನ ಗಚ್ಚಿ ಬೌಲಿ ಕ್ರೀಡಾಂಗಣದಲ್ಲಿ ಅಕ್ಷರಶಃ ಕಳಾಹೀನ ಪ್ರದರ್ಶನ ನೀಡಿ 24-42 ಅಂತರದ ಹೀನಾಯ ಸೋಲುಂಡಿತು.
ಪಂದ್ಯದಲ್ಲಿ ಬೆಂಗಳೂರು ತಂಡದ ಸ್ಟಾರ್ ರೇಡರ್ ಪವನ್ ಕುಮಾರ್ ಸೆಹ್ರಾವತ್ (8) ಹೋರಾಟ ಪ್ರದರ್ಶಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ನಾಯಕ ರೋಹಿತ್ ಕುಮಾರ್ (4) ರೇಡಿಂಗ್ನಲ್ಲಿ ಯಸಸ್ಸು ತಂದುಕೊಡುವಲ್ಲಿ ವಿಫಲರಾದ ಪರಿಣಾಮ ಬುಲ್ಸ್ ಅಂಕ ಗಳಿಕೆಯಲ್ಲಿ ಹಿಂದೆ ಬಿದ್ದಿತು. ಟ್ಯಾಕಲ್ನಲ್ಲಿ ಮಹೇಂದರ್ ಸಿಂಗ್ ನಾಲ್ಕು ಅಂಕ ಗಳಿಸಿ ಗಮನ ಸೆಳೆದರು.
ಮತ್ತೊಂದೆಡೆ ಸಂಘಟಿತ ಪ್ರದರ್ಶನ ನೀಡಿದ ಗುಜರಾತ್ ಜಯಂಟ್ಸ್ ತಂಡದ ಪರ ಎಲ್ಲಾ ಆಟಗಾರರು ತಂದುಕೊಟ್ಟ ಅಂಗಳಿಂದ ಮೇಲುಗೈ ಲಭ್ಯವಾಯಿತು. ಪ್ರಮುಖವಾಗಿ ಡಿಫೆನ್ಸ್ ವಿಭಾಗದ ಕಡೆಗೆ ಹೆಚ್ಚಿನ ಒತ್ತು ನೀಡಿದ ಜಯಂಟ್ಸ್ ಎದುರಾಳಿ ಬೆಂಗಳೂರು ತಮಡದ ರೇಡರ್ಗಳನ್ನು ಯಶಸ್ವಿಯಾಗಿ ಬಂಧಿಸಿ ಸತತ ಅಂಕಗಳನ್ನು ದಾಖಲಿಸಿತು. ಅಲ್ಲದೆ ಮೂರು ಬಾರಿ ಬುಲ್ಸ್ ಪಡೆಯನ್ನು ಆಲ್ಔಟ್ ಮಾಡಿ ಒಟ್ಟು 6 ಲೋನಾ ಅಂಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.
ಜಯಂಟ್ಸ್ ತಂಡದ ಪರ 15 ಬಾರಿ ದಾಳಿಗಿದ ಯುವ ರೇಡರ್ ಸಚಿನ್ ಒಟ್ಟು ಆರು ಅಂಕಗಳನ್ನು ಗಳಿಸಿದರು. ಅವರಿಗೆ ಡಿಫೆಂಡರ್ ಸುನಿಲ್ ಕುಮಾರ್ (6) ಮತ್ತು ಜಿಬಿ ಮೋರೆ (6) ಉತ್ತಮ ಸಾಥ್ ನೀಡಿದರು. ಬದಲಿ ಆಟಗಾರ ಸೋನು ಕೂಡ 5 ಅಂಕಗಳ ಕಾಣಿಕೆ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಪಂದ್ಯದ ಹಾಫ್ ಟೈಮ್ ಹೊತ್ತಿಗೆ 21-10 ಅಂಕಗಳಿಂದ ಒಟ್ಟು 11 ಅಂಕಗಳ ಮುನ್ನಡೆ ಗಳಿಸಿದ್ದ ಗುಜರಾತ್ ತಂಡ ಹಿಂದಿರುಗಿ ನೋಡಲೇ ಇಲ್ಲ. ರೇಡಿಂಗ್ ಮತ್ತು ಟ್ಯಾಕಲ್ ಎಲ್ಲದರಲ್ಲೂ ಅಂಕಗಳನ್ನು ಪೋಣಿಸುತ್ತಾ ಸಾಗುವ ಮೂಲಕ ಕಳೆದ ವರ್ಷದ ಫೈನಲ್ ಸೋಲಿಗೆ ಭರ್ಜರಿ ರೀತಿಯಲ್ಲಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.