
ಪಂಚಕುಲ, ಡಿಸೆಂಬರ್ 20: ಭಾರತ ಕಬಡ್ಡಿ ತಂಡದ ಪ್ರತಿಭಾನ್ವಿತ ಆಟಗಾರ ಅನೂಪ್ ಕುಮಾರ್ ಅವರು ಕಬಡ್ಡಿಗೆ ನಿವೃತ್ತಿ ಘೋಷಿಸಿದ್ದಾರೆ. ಬುಧವಾರ (ಡಿಸೆಂಬರ್ 19) ಹರ್ಯಾಣದ ಪಂಚಕುಲ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಗುಜರಾತ್ ಫಾರ್ಚೂನ್ ಜೈಂಟ್ಸ್ ಪಂದ್ಯದ ವೇಳೆ ಅನೂಪ್ ಕಬಡ್ಡಿಯಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದರು.
ಸುಮಾರು 15 ವರ್ಷಗಳ ಕಾಲ ಕಬಡ್ಡಿ ವೃತ್ತಿ ಜೀವನದಲ್ಲಿ ಕಳೆದಿರುವ 35ರ ಹರೆಯದ ಅನೂಪ್ ದೇಸಿ ತಂಡವನ್ನು ಮುನ್ನಡೆಸಿದ್ದಷ್ಟೇ ಅಲ್ಲ, ವಿಶ್ವಕಪ್ ಮತ್ತು ಏಷ್ಯಾನ್ ಗೇಮ್ಸ್ ನಲ್ಲಿ ಭಾರತ ಗೆಲ್ಲುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಇವರಿಗೆ ಅರ್ಜುನ ಪ್ರಶಸ್ತಿಯೂ ಲಭಿಸಿದೆ. ಈ ಆವೃತ್ತಿಯಲ್ಲಿ ಅನೂಪ್ ಜೈಪುರ್ ತಂಡದಲ್ಲಿದ್ದರು.
2006ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ಸೌತ್ ಏಷ್ಯನ್ ಗೇಮ್ಸ್ ಮೂಲಕ ಅನೂಪ್ ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದರು. ಭಾರತದ ತಂಡದ ನಾಯಕರಾಗಿದ್ದುಕೊಂಡು ಅನೂಪ್ 2014ರ ಏಷ್ಯನ್ ಗೇಮ್ಸ್ ಮತ್ತು 2016ರ ಕಬಡ್ಡಿ ವಿಶ್ವಕಪ್ ನಲ್ಲಿ ಚಿನ್ನದ ಪದಕ ಜಯಿಸಿದ್ದರು.
ಪಿಕೆಎಲ್ ಎರಡನೇ ಆವೃತ್ತಿಯಲ್ಲಿ ಯು ಮುಂಬಾ ತಂಡಕ್ಕೆ ನಾಯಕರಾಗಿದ್ದ ಅನೂಪ್, ಮುಂಬೈ ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬುಧವಾರ (ಡಿಸೆಂಬರ್ 19) ನಡೆದ ಜೈಪುರ್ ಮತ್ತು ಗುಜರಾತ್ ಮುಖಾಮುಖಿಯಲ್ಲಿ ಗುಜರಾತ್ 33-31ರ ಗೆಲುವನ್ನಾಚರಿಸಿತು.