
ಚೆನ್ನೈ, ಅಕ್ಟೋಬರ್ 22: ಚೆಸ್ ಟೂರ್ನಿಯೊಂದರಿಂದ 11ರ ಹರೆಯದ ಹುಡುಗನೊಬ್ಬನನ್ನು ಹೊರ ಕಳುಹಿಸಿರುವ ಬಗ್ಗೆ ಆಲ್ ಇಂಡಿಯಾ ಚೆಸ್ ಫೆಡರೇಶನ್ (ಎಐಸಿಎಫ್) ಹಾಗು ತಮಿಳುನಾಡು ಸ್ಟೇಟ್ ಚೆಸ್ ಅಸೋಸಿಯೇಷನ್ (ಟಿಎನ್ಎಸ್ಸಿಎ) ಇನ್ನೂ ತುಟಿ ಬಿಚ್ಚಿಲ್ಲ. ಆದರೆ ಹುಡುಗನ ತಂದೆ ಎಐಸಿಎಫ್ ಅಧ್ಯಕ್ಷರಿಗೆ ಈ ಬಗ್ಗೆ ವಿವರಣೆ ಕೇಳಿ ಪತ್ರ ಬರೆದಿದ್ದಾರೆ.
ನವದೆಹಲಿಯಲ್ಲಿ ನಡೆಯಲಿರುವ ವರ್ಲ್ಡ್ ಜೂನಿಯರ್ ಚೆಸ್ ಚಾಂಪಿಯನ್ಷಿಪ್ನ ಭಾಗವಾಗಿ ನಡೆಯುತ್ತಿದ್ದ ಟೂರ್ನಿಯಲ್ಲಿ ಆಡುತ್ತಿದ್ದ 11ರ ಹರೆಯದ ಶಾಲಾ ಬಾಲಕ ಕಾರ್ತಿಕ್ ರಾಹುಲ್ ಅವರನ್ನು ತಮುಳುನಾಡಿನಲ್ಲಿರುವ ತಿರುನೆವೇಲಿ ಡಿಸ್ಟ್ರಿಕ್ಟ್ ಚೆಸ್ ಡೆವಲಪ್ಮೆಂಟ್ ಅಸೋಸಿಯೇಷನ್ನ (ಟಿಡಿಸಿಡಿಎ) ಅಧಿಕಾರಿಯೊಬ್ಬರು ಟೂರ್ನಿಯಿಂದ ಹೊರಗೆ ಕಳುಹಿಸಿ ಕ್ರೀಡಾವಲಯದಲ್ಲಿ ಕಿಡಿ ಹಚ್ಚಿದ್ದಾರೆ.
ರಾಹುಲ್ ತಂದೆ ಕೆ ಮುರುಗೇಶ್ ಬಾಬು, ಎಐಸಿಎಫ್ ಅಧ್ಯಕ್ಷ ಪಿಆರ್ ವೆಂಕಟ್ರಾಮ ರಾಜು ಅವರಿಗೆ ಘಟನೆ ಬಗ್ಗೆ ವಿವರಿಸಿ ಮೇಲ್ ರವಾನಿಸಿದ್ದಾರೆ. 13ರ ವಯೋಮಾನದೊಳಗಿನವರಿಗಾಗಿ ಶನಿವಾರ (ಅಕ್ಟೋಬರ್ 19) ತಿರುನೆವೇಲಿಯಲ್ಲಿ ನಡೆದ ಮಿಳುನಾಡು ರಾಜ್ಯ ಮಟ್ಟದ ಚೆಸ್ ಟೂರ್ನಮೆಂಟ್ಗಾಗಿ ಮಗನ ಎಂಟ್ರಿ ಫೀಸ್ ಅನ್ನು ತಾನು ಕಟ್ಟಿದ್ದಾಗಿ ಮುರುಗೇಶ್ ಹೇಳಿಕೊಂಡಿದ್ದಾರೆ.
ಟೂರ್ನಿ ಆರಂಭವಾಗಿ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಆಡುತ್ತಿದ್ದಾಗ ಟಿಡಿಸಿಡಿಎ ಅಧಿಕಾರಿ ಬಂದು ರಾಹುಲ್ನನ್ನು ಅರ್ಧದಲ್ಲೇ ಸ್ಪರ್ಧೆಯಿಂದ ಹೊರ ಕಳುಹಿಸಿರುವುದಾಗಿ ರಾಹುಲ್ ತಂದೆ ದೂರಿದ್ದಾರೆ. 'ಇಂಥ ಟೂರ್ನಿಗಳಲ್ಲಿ ಇನ್ಮುಂದೆ ಆಡಬಾರದೆಂದು ಕ್ಷಮಾಪಣಾ ಪತ್ರ ಬರೆಸಿಕೊಂಡು ಅಧಿಕಾರಿ ತನ್ನ ಮಗನನ್ನು ಸ್ಪರ್ಧೆಯಿಂದ ಹೊರಗೆ ಕಳುಹಿಸಿದ್ದಾರೆ' ಎಂದು ಮುರುಗೇಶ್ ದೂರಿನಲ್ಲಿ ತಿಳಿಸಿದ್ದಾರೆ.