ಜಾರ್ಖಂಡ್ನ ದುಮ್ಕಾ ಜಿಲ್ಲೆಯಲ್ಲಿ ಫುಟ್ಬಾಲ್ ಪಂದ್ಯದ ವೇಳೆ ಆಟದ ಮೈದಾನಕ್ಕೆ ಸಿಡಿಲು ಬಡಿದು ಇಬ್ಬರು ಸ್ಥಳೀಯ ಪ್ರೇಕ್ಷಕರು ಸಾವನ್ನಪ್ಪಿದ್ದು ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವ ಮೂವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 23ರ ಶನಿವಾರ ಸಂಜೆ ದುಮ್ಕಾ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆ ಪ್ರಾರಂಭವಾದ ಬಳಿಕ, ಹನ್ಸ್ದಿಹಾ ಪ್ರದೇಶದ ಫುಟ್ಬಾಲ್ ಆಟದ ಮೈದಾನದ ಪಕ್ಕದಲ್ಲಿ ಹಲವಾರು ಪ್ರೇಕ್ಷಕರು ಟೆಂಟ್ ಅಡಿಯಲ್ಲಿ ಆಶ್ರಯ ಪಡೆದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಮೈದಾನದ ಟೆಂಟ್ಗೆ ಭಾರೀ ಸಿಡಿಲು ಅಪ್ಪಳಿಸಿದ್ದು, ಶಿವಲಾಲ್ ಸೊರೆನ್ (32) ಮತ್ತು ಸಂತ್ಲಾಲ್ ಹೆಂಬ್ರಾಮ್ (20) ಎಂಬ ಇಬ್ಬರು ಪ್ರೇಕ್ಷಕರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಹನ್ಸ್ದಿಹಾ ಪೊಲೀಸ್ ಠಾಣಾಧಿಕಾರಿ ಜಿತೇಂದ್ರ ಕುಮಾರ್ ಸಾಹು ಮಾಹಿತಿ ನೀಡಿದ್ದಾರೆ.
ಎಲ್ಲಾ ಗಾಯಾಳುಗಳನ್ನು ಸರೈಯಾಹತ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಜಿಲ್ಲಾ ಸಿವಿಲ್ ಸರ್ಜನ್ ಬಚ್ಚಾ ಪ್ರಸಾದ್ ಸಿಂಗ್ ಮಾತನಾಡಿ, ಗಾಯಗೊಂಡ ಮೂವರಲ್ಲಿ ಒಬ್ಬರನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಡಿಸ್ಚಾರ್ಜ್ ಮಾಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಇನ್ನಿಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಿದ್ದಾರೆ.
ಇದೇ ಮಾದರಿಯಲ್ಲಿ ಕಳೆದ ಅಕ್ಟೋಬರ್ನಲ್ಲಿ ಒಡಿಶಾದ ಸುಂದರ್ಗಢ ಜಿಲ್ಲೆಯ ಬ್ರಹ್ಮಣಿ ತರಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ಜನ್ ಗ್ರಾಮ ಪಂಚಾಯತ್ (ಜಿಪಿ) ಯ ಬಿರುಯಲ್ ಗ್ರಾಮದಲ್ಲಿ ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಮೃತರಾಗಿದ್ದರು.