
ಹೊಸದಿಲ್ಲಿ, ಏಪ್ರಿಲ್ 24: ಭಾರತದ ಪ್ರತಿಭಾನ್ವಿತ ಶಾಟ್ ಪುಟ್ ಎಸೆತಗಾರ ತಜಿಂದರ್ಪಾಲ್ ಸಿಂಗ್ ತೂರ್, ದೋಹಾದಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಪುರುಷರ ವಿಭಾಗದಲ್ಲಿ ಸ್ವರ್ಣ ಸಾಧನೆ ಮೆರೆದಿದ್ದಾರೆ.
24 ವರ್ಷದ ಪಂಜಾಬ್ ಮೂಲದ ತಜಿಂದರ್ಪಾಲ್ ಪುರುಷರ ಶಾಟ್ ಪುಟ್ ಸ್ಪರ್ಧೆಯಲ್ಲಿ ಗುಂಡನ್ನು 20.22 ಮೀಟರ್ ದೂರಕ್ಕೆಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
"ನನ್ನ ತಲೆಯಲ್ಲಿ 21 ಮೀ.ಗೂ ಅಧಿಕ ದೂರಕ್ಕೆ ಗುಂಡನ್ನು ಎಸೆಯಬೇಕೆಂಬ ಏಕಮಾತ್ರ ಆಲೋಚನೆಯಿತ್ತು. ಆದರೂ, ಫಲಿತಾಂಶ ಸಂಸತಸ ನೀಡಿದೆ. ಈಗಷ್ಟೇ ಋತು ಆರಂಭವಾಗಿದ್ದು ನನ್ನ ಪ್ರದರ್ಶನ ತೃಪ್ತಿದಾಯಕವಾಗಿದೆ. 21 ಮೀಟರ್ ದೂರಕ್ಕೆ ಎಸೆಯುವುದು ನನ್ನ ಗುರಿ. ಇದೇ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್ಷಿಪ್ನಲ್ಲಿಇದನ್ನು ಸಾಧಿಸಲಿದ್ದೇನೆ,'' ಎಂದು ತಜಿಂದರ್ ಪಾಲ್ ಹೇಳಿದ್ದಾರೆ.
ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲೂ ತಜಿಂದರ್ಪಾಲ್ ಬಂಗಾರದ ಸಾಧನೆ ಮಾಡಿದ್ದರು. ಇದೀಗ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಗೆದ್ದ ಪದಕವನ್ನು ತಮ್ಮ ತಂದೆ ಕರಮ್ ಸಿಂಗ್ಗೆ ಅರ್ಪಿಸಿದ್ದಾರೆ. ಏಷ್ಯಾಡ್ನಲ್ಲಿ ತಜಿಂದರ್ ಚಿನ್ನ ಗೆದ್ದ ಕೆಲವೇ ದಿನಗಳಲ್ಲಿ ಅವರ ತಂದೆ ಇಹ ಲೋಕ ತ್ಯಜಿಸಿದ್ದರು.
"ಕಳೆದ ಒಂದು ವರ್ಷ ನನ್ನ ಪಾಲಿಗೆ ಬಹಳ ಕಷ್ಟವಾಗಿತ್ತು. ಆದರೆ ನನ್ನ ಕೋಚ್ (ಮೋಹಿಂದರ್ ಸಿಂಗ್ ಢಿಲ್ಲಾನ್) ನನೆ ಆತ್ಮಸ್ಥೈರ್ಯ ತುಂಬಿದರು. ಈ ಪದಕ ನನ್ನ ತಂದೆಗೆ. ಅವರು ನನ್ನ ಸಲುವಾಗಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. ಅವರು ಇಂದು ಬದುಕಿರಬೇಕಿತ್ತು ಎಂದು ಬಯಸುತ್ತೇನೆ. ಆದರೆ, ಕೆಲ ಸಂಗತಿಗಳು ನಮ್ಮಎಲ್ಲೆಗೆ ಮೀರಿದ್ದಾಗಿರುತ್ತದೆ,'' ಎಂದು ತಜಿಂದರ್ ಹೇಳಿದ್ದಾರೆ.
ಇದೇ ವೇಳೆ ಮುಂಬರುವ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು ಅಮೆರಿಕದಲ್ಲಿ ಸಿದ್ಧತೆ ನಡೆಸುವ ಬಯಕೆಯನ್ನೂ ತಜಿಂದರ್ ವ್ಯಕ್ತಪಡಿಸಿದ್ದಾರೆ.