ಆಗಸ್ಟ್ 17 ಶನಿವಾರ, 2024ರ ಪ್ಯಾರಿಸ್ ಒಲಿಂಪಿಕ್ ಹಾಕಿಯಲ್ಲಿ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಸ್ಟಾರ್ ಡಿಫೆಂಡರ್ ಅಮಿತ್ ರೋಹಿದಾಸ್ ಪ್ರಮುಖ ಪಾತ್ರವಹಿಸಿದರು. ಕೆಲ ದಿನಗಳ ಹಿಂದೆ ಪದಕದೊಂದಿಗೆ ತವರಿಗೆ ಮರಳಿದ ಭಾರತ ಹಾಕಿ ತಂಡದ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಲಾಗಿತ್ತು.
ಇದೀಗ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರನ್ನು ಶುಕ್ರವಾರ ಲೋಕಸೇವಾ ಭವನದಲ್ಲಿ ಸ್ಟಾರ್ ಡಿಫೆಂಡರ್ ಅಮಿತ್ ರೋಹಿದಾಸ್ ಭೇಟಿ ಮಾಡಿದ್ದಾರೆ. ಲೋಕಸೇವಾ ಭವನಕ್ಕೆ ಆಗಮಿಸಿದ ಅಮಿತ್ ಅವರನ್ನು ಒಡಿಶಾ ಸಿಎಂ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರು ಸ್ಟಾರ್ ಡಿಫೆಂಡರ್ ನನ್ನು ಒಡಿಶಾದ ಹೆಮ್ಮೆ ಎಂದು ಬಣ್ಣಿಸಿದ್ದಾರೆ.

ಇದೇ ವೇಳೆ ಮಾತನಾಡಿರುವ ಸಿಎಂ ಮಾಝಿ, " ಅಮಿತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಡಿಶಾಗೆ ನಿಜವಾದ ಗುರುತಾಗಿದ್ದಾರೆ. 4.5 ಕೋಟಿ ಒಡಿಯಾ ಜನತೆಯ ಶುಭ ಹಾರೈಕೆಗಳು ಮತ್ತು ಜಗನ್ನಾಥನ ಆಶೀರ್ವಾದದೊಂದಿಗೆ ಭಾರತ ಹಾಕಿ ತಂಡವು 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಹಾಕಿಯಲ್ಲಿ ಅಮಿತ್ ಅವರ ಯಶಸ್ಸಿನ ಪಯಣವನ್ನು ವಿವರಿಸಿದ ಸಿಎಂ ಮಾಝಿ, ಒಡಿಶಾದ ಹಾಕಿ ಭದ್ರಕೋಟೆ ಎಂದು ಕರೆಯುವ ಸುಂದರ್ಗಢ ಜಿಲ್ಲೆಯ ಸೌನಾಮಾರಾ ಗ್ರಾಮದಲ್ಲಿ ಅಮಿತ್ ಜನಿಸಿದರು. 2017ರಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹಾಕಿ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡದ ಗೆಲುವಿನಲ್ಲಿ ಅಮಿತ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಇದಾದ ಬಳಿಕ ಮಾತನಾಡಿದ ಅಮಿತ್, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಯಶಸ್ಸಿನ ನಂತರ, ತನ್ನ ಹೃದಯ ಒಡಿಶಾವನ್ನು ತಲುಪಲು ಹಾತೊರೆಯುತ್ತಿತ್ತು. ಭುವನೇಶ್ವರಕ್ಕೆ ಆಗಮಿಸಿ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರನ್ನು ಭೇಟಿ ಮಾಡಿರುವುದು ತುಂಬಾ ಸಂತೋಷವಾಗಿದೆ. ನಾವು (ಭಾರತೀಯ ಹಾಕಿ ತಂಡ) 52 ವರ್ಷಗಳ ನಂತರ ಒಲಿಂಪಿಕ್ಸ್ನಲ್ಲಿ ಸತತ ಎರಡು ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.