ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಪತಿ ವಿರಾಟ್ ಕೊಹ್ಲಿ ಅವರೊಂದಿಗೆ ಭಾನುವಾರ ದೀಪಾವಳಿ ಹಬ್ಬ ಆಚರಿಸಲು ಬೆಂಗಳೂರಿನಲ್ಲಿರುವ ಭಾರತ ತಂಡದ ಅಧಿಕೃತ ಹೋಟೆಲ್ಗೆ ಭೇಟಿ ನೀಡಿದ್ದಾರೆ.
ನವೆಂಬರ್ 12ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 2023ರ ಐಸಿಸಿ ಏಕದಿನ ವಿಶ್ವಕಪ್ನ ಅಂತಿಮ ಲೀಗ್ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಅಂಗಳದಲ್ಲಿ ಕಣಕ್ಕಿಳಿಯಲಿದ್ದಾರೆ.

ಟೀಮ್ ಇಂಡಿಯಾ 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಇಲ್ಲಿಯವರೆಗೆ ಅಜೇಯ ತಂಡವಾಗಿದೆ ಮತ್ತು ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಂತರ ಅಜೇಯ ದಾಖಲೆಯೊಂದಿಗೆ ಏಕದಿನ ವಿಶ್ವಕಪ್ ಗೆದ್ದ ಮೂರನೇ ತಂಡವೆನಿಸಿಕೊಳ್ಳಲು ಎದುರು ನೋಡುತ್ತಿದೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಹೊಂದುವ ಮೂಲಕ ರೋಹಿತ್ ಶರ್ಮಾ ಪಡೆ ಈಗಾಗಲೇ ಸೆಮಿಫೈನಲ್ ಹಂತದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಳೆದ 15 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರ ಆಡುತ್ತಿರುವ ವಿರಾಟ್ ಕೊಹ್ಲಿಯ ತವರು ಮೈದಾನದಲ್ಲಿ ಭಾರತ ತಂಡದ ಅಂತಿಮ ಲೀಗ್ ಹಂತದ ಪಂದ್ಯವು ನಡೆಯಲಿದೆ.

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ಅನುಷ್ಕಾ ಶರ್ಮಾ ಆಗಾಗ ಭೇಟಿ ನೀಡುತ್ತಿರುತ್ತಾರೆ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕಾಗಿ ತನ್ನ ಪತಿ ಹಾಗೂ ಭಾರತ ತಂಡವನ್ನು ಬೆಂಬಲಿಸಲು ಮತ್ತು ಕುಟುಂಬವಾಗಿ ದೀಪಾವಳಿಯನ್ನು ಆಚರಿಸಲು ಈಗಾಗಲೇ ತಂಡದ ಹೋಟೆಲ್ಗೆ ಚೆಕ್ ಇನ್ ಮಾಡಿದ್ದಾರೆ.
2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 8 ಪಂದ್ಯಗಳಲ್ಲಿ 2 ಶತಕ ಮತ್ತು 4 ಅರ್ಧಶತಕಗಳೊಂದಿಗೆ 543 ರನ್ಗಳೊಂದಿಗೆ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ಕಳೆದ ವಾರ ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತಮ್ಮ ಕೊನೆಯ ಪಂದ್ಯದಲ್ಲಿ 49 ಏಕದಿನ ಶತಕಗಳನ್ನು ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ಅಸಾಧಾರಣ ದಾಖಲೆಯನ್ನು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಸರಿಗಟ್ಟಿದರು.
ಮುಂದಿನ ಕೆಲವು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಶತಕ ಸಿಡಿಸಿದರೆ, ಏಕದಿನ ಕ್ರಿಕೆಟ್ನಲ್ಲಿ 50 ಶತಕಗಳನ್ನು ಪೂರೈಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಲಿದ್ದಾರೆ.
ಇದೇ ವೇಳೆ ವೆಸ್ಟ್ ಇಂಡೀಸ್ನ ಲೆಜೆಂಡ್ ಸರ್ ವಿವಿಯನ್ ರಿಚರ್ಡ್ಸ್ ಅವರು ಐಸಿಸಿಯೊಂದಿಗಿನ ತಮ್ಮ ಇತ್ತೀಚಿನ ಅಂಕಣದಲ್ಲಿ ವಿರಾಟ್ ಕೊಹ್ಲಿ ಅವರನ್ನು ಶ್ಲಾಘಿಸಿದರು.
"ಪ್ರದರ್ಶನದಲ್ಲಿ ಪ್ರತಿಭಾವಂತ ಆಟಗಾರರು ಸಂಪೂರ್ಣ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅವರೆಲ್ಲರಿಗಿಂತ ಅಗ್ರಸ್ಥಾನದಲ್ಲಿ ನೀವು ವಿರಾಟ್ ಕೊಹ್ಲಿಯನ್ನು ನೋಡಬಹುದು. ನಾನು ಬಹಳ ಸಮಯದಿಂದ ವಿರಾಟ್ ಅವರ ದೊಡ್ಡ ಅಭಿಮಾನಿ ಮತ್ತು ಶ್ರೇಷ್ಠ ಸಚಿನ್ ಅವರಂತಹ ಸಾರ್ವಕಾಲಿಕ ದಾಖಲೆಯನ್ನು ಮುರಿದು ಅವರ ಸಾಮರ್ಥ್ಯವನ್ನು ತೋರಿಸುತ್ತಲೇ ಇದ್ದಾರೆ," ಎಂದು ವಿವಿಯನ್ ರಿಚರ್ಡ್ಸ್ ಐಸಿಸಿ ಅಂಕಣದಲ್ಲಿ ಬರೆದಿದ್ದಾರೆ.
"ಈ ವಿಶ್ವಕಪ್ಗೆ ಮೊದಲು ವಿರಾಟ್ ಕೊಹ್ಲಿ ಕೆಲವು ಕಠಿಣ ಸಮಯಗಳನ್ನು ಎದುರಿಸುತ್ತಿದ್ದರು. ನಂತರ, ಧೈರ್ಯಶಾಲಿಯಾಗಿ ಅದರಿಂದ ಹೊರಬಂದರು. ಇದಕ್ಕಾಗಿ ಬ್ಯಾಕ್ರೂಮ್ ಸಿಬ್ಬಂದಿ ಮತ್ತು ಅವರನ್ನು ಬೆಂಬಲಿಸಿದ ಎಲ್ಲರಿಗೂ ಕ್ರೆಡಿಟ್ ನೀಡಬೇಕು", ಎಂದು ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್ ತಿಳಿಸಿದ್ದಾರೆ.