ಭಾರತದ ಭರವಸೆಯ ಚೆಸ್ ಆಟಗಾರ ಅರ್ಜುನ್ ಎರಿಗೈಸಿ ಅವರು ದೋಹಾದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರು ಫಿಡೆ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕವನ್ನು ಗೆದ್ದು ಸಾಧನೆ ಮಾಡಿದ್ದಾರೆ. ಟೂರ್ನಿಯುದ್ಧಕ್ಕೂ ಅಮೋಘ ಪ್ರದರ್ಶನ ನೀಡಿದ ಅರ್ಜುನ್ ಕಂಚಿನ ಸಾಧನೆ ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇವರಿಗೂ ಮೊದಲು ದಿಗ್ಗಜ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಪದಕ ಸಾಧನೆಯನ್ನು ಮಾಡಿದ್ದರು.
ಅರ್ಜುನ್ ಎರಿಗೈಸಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದರು. ಅರ್ಜುನ್ ವಿಶ್ವ ರಾಪಿಡ್ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ಗಿಂತ ಕೇವಲ ಒಂದು ಅಂಕ ಹಿಂದಿದ್ದಾರೆ. ಈ ಟೂರ್ನಿಯಲ್ಲಿ ಅರ್ಜುನ್ 9.5 ಅಂಕಗಳನ್ನು ಕಲೆ ಹಾಕಿದರು. ಇವರು ಆಡಿದ 13 ಪಂದ್ಯಗಳಲ್ಲಿ ಬೆಳ್ಳಿ ಪದಕ ವಿಜೇತ ವ್ಲಾಡಿಸ್ಲಾವ್ ಆರ್ಟೆಮಿಯೆವ್ ವಿರುದ್ಧ ಮತ್ತು ಟರ್ಕಿಶ್ ಆಟಗಾರ ಯಾಗಿಜ್ ಕಾನ್ ಎರ್ಡೊಗ್ಮುಶ್ ವಿರುದ್ಧ ಮಾತ್ರ ಸೋಲು ಕಂಡಿದ್ದರು. ನಾಲ್ಕು ಜನ ಆಟಗಾರರು 9.5 ಅಂಕ ಕಲೆ ಹಾಕಿದ್ದು ಅರ್ಜುನ್ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು.

ಮಹಿಳಾ ವಿಭಾಗದಲ್ಲಿ ಭರವಸೆಯ ಚೆಸ್ ಆಟಗಾರ್ತಿ ಕೊನೆರು ಹಂಪಿ ಕೊಂಚದರಲ್ಲಿ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಅವಕಾಶವನ್ನು ಕೈ ಚೆಲ್ಲಿದರು. ಇವರು ಅಂತಿಮವಾಗಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಭಾರತದ ಚೆಸ್ ಲೋಕದಲ್ಲಿ ಡಿ. ಗುಕೇಶ್, ಪ್ರಜ್ಞಾನಂದ ಅವರಂತೆಯೇ ಅರ್ಜುನ್ ಎರಿಗೈಸಿ ಕೂಡ ಈಗ ಜಾಗತಿಕ ಮಟ್ಟದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ದೋಹಾದಲ್ಲಿ ನಡೆದ FIDE ವಿಶ್ವ ರಾಪಿಡ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಸಾಧನೆ ಮಾಡಿರುವ ಅರ್ಜುನ್ ಎರಿಗೈಸಿ ಅವರಿಗೆ ಪ್ರಧಾನಿ ಮೋದಿ ಶುಭ ಕೋರಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಅರ್ಜುನ್ ಅವರಿಗೆ ಅಭಿನಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದಾರೆ. ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂದು ನಾಯ್ಡು ಬರೆದುಕೊಂಡಿದ್ದಾರೆ. ಇನ್ನು ಮಹಿಳಾ ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದ ಕೊನೆರು ಹಂಪಿಯನ್ನು ಎನ್. ಚಂದ್ರಬಾಬು ನಾಯ್ಡು ಅಭಿನಂದಿಸಿದ್ದಾರೆ.