ಭಾರತ ಹಾಕಿ ತಂಡದ ನಾಯಕಿ ಸಲೀಮಾ ಟೆಟೆ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕೇಂದ್ರ ಕ್ರೀಡಾ ಸಚಿವಾಲಯವು 2024ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದೆ. 4 ಆಟಗಾರರಿಗೆ ಖೇಲ್ ರತ್ನ ಮತ್ತು 32 ಆಟಗಾರರಿಗೆ ಅರ್ಜುನ್ ಪ್ರಶಸ್ತಿ ನೀಡುವುದಾಗಿ ಘೋಷಿಸಲಾಗಿದೆ. ಜನವರಿ 17 ರಂದು ಆಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅರ್ಜುನ್ ಪ್ರಶಸ್ತಿ ಪಡೆಯುತ್ತಿರುವ 32 ಆಟಗಾರರ ಪೈಕಿ ಜಾರ್ಖಂಡ್ ಮೂಲದ ಸಲೀಮಾ ಟೆಟೆ ಕೂಡ ಒಬ್ಬರು.
ಸಲೀಮಾ ಪ್ರಸ್ತುತ ಭಾರತ ಮಹಿಳಾ ಹಾಕಿ ತಂಡದ ನಾಯಕಿಯಾಗಿದ್ದಾರೆ. ಅವರನ್ನು ಮೇ 2024 ರಲ್ಲಿ ಸವಿತಾ ಪುನಿಯಾ ಬದಲಿಗೆ ತಂಡದ ನಾಯಕರನ್ನಾಗಿ ಮಾಡಲಾಯಿತು. ಸಲೀಮಾ ಅವರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಹಾಕಿ ಇಂಡಿಯಾ ಅಧ್ಯಕ್ಷ ಭೋಲಾನಾಥ್ ಸಿಂಗ್ ಅವರು ಸಲೀಮಾ ಟೆಟೆ ಅವರನ್ನು ಅಭಿನಂದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಭೋಲಾನಾಥ್ ಸಿಂಗ್, ಸಲೀಮಾ ಟೆಟೆ ಅರ್ಜುನ ಪ್ರಶಸ್ತಿ ಸ್ವೀಕರಿಸಿರುವುದು ದೊಡ್ಡ ಸೌಭಾಗ್ಯ. ಈ ಹಿಂದೆ ಮೈಕಲ್ ಕಿಂಡೋ ಅರ್ಜುನ ಪ್ರಶಸ್ತಿ ಪಡೆದಿದ್ದರು. ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಜಾರ್ಖಂಡ್ನ ಮೊದಲ ಆಟಗಾರ್ತಿ ಸಲೀಮಾ. ಇದು ಇಡೀ ಜಾರ್ಖಂಡ್ಗೆ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.
ಭಾರತ ಮಹಿಳಾ ಹಾಕಿ ತಂಡವನ್ನು ಕಳೆದ ಕೆಲವು ವರ್ಷಗಳಿಂದ ನಾಯಕಿಯಾಗಿ ಸಲೀಯಾ ಟೆಟೆ ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಸಲೀಯಾ ಟೆಟೆ ಮೂಲತಃ ಜಾರ್ಖಂಡ್ ರಾಜ್ಯದ ಸಿಮ್ಡೆಗಾ ಜಿಲ್ಲೆಯ ನಿವಾಸಿ. ಅವರ ತಂದೆಯ ಹೆಸರು ಸುಲಕ್ಷಣ್ ಟೆಟೆ, ಇವರು ಕೂಡ ಸ್ಥಳೀಯ ಮಟ್ಟದಲ್ಲಿ ಹಾಕಿ ಆಡುತ್ತಿದ್ದಾರೆ. 2016ರಲ್ಲಿ ಸಲೀಮಾ ಜೂನಿಯರ್ ಭಾರತೀಯ ಹಾಕಿ ಮಹಿಳಾ ತಂಡಕ್ಕೆ ಆಯ್ಕೆಯಾದರು. ಇದಾದ ನಂತರ ಸಲೀಮಾ ಹಿಂತಿರುಗಿ ನೋಡಲೇ ಇಲ್ಲ.
ಸಿಮ್ಡೇಗಾ ಹಾಕಿ ಫೆಡರೇಶನ್ ಅಧ್ಯಕ್ಷ ಮನೋಜ್ ಕೊಂಬೆಗಿ ಅವರು 2010 ರಲ್ಲಿ ಗ್ರಾಮೀಣ ಮಟ್ಟದಲ್ಲಿ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಬಂದಾಗ ಸಲೀಮಾ ಅವರ ಪ್ರತಿಭೆಯನ್ನು ಗುರುತಿಸಿದರು. ಸಲೀಮಾ ಅವರು ಡಿಫೆಂಡರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈಗ ಮಿಡ್ ಫೀಲ್ಡರ್ ಆಗಿ ಆಡುತ್ತಿದ್ದಾರೆ. ಅಗತ್ಯವಿದ್ದಾಗ ಹಲವು ಬಾರಿ ತಂಡದ ಫಾರ್ವರ್ಡ್ ಆಟಗಾರ್ತಿಯಾಗಿ ಆಡಿದ್ದಾರೆ. ಇದರ ಪ್ರತಿಫಲವಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಲೀಯಾ ಸದ್ದು ಮಾಡುತ್ತಿದ್ದಾರೆ.