
ಜಕಾರ್ತಾ, ಆಗಸ್ಟ್ 31: ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಅವರು ಏಷ್ಯನ್ ಗೇಮ್ಸ್ ಪುರುಷರ ಬಾಕ್ಸಿಂಗ್ ಸೆಮಿಫೈನಲ್ ನಿಂದ ವೈದ್ಯಕೀಯವಾಗಿ ಅನರ್ಹರಾಗಿ (ಮೆಡಿಕಲಿ ಅನ್ ಫಿಟ್) ಪಂದ್ಯದಿಂದ ಹೊರ ನಡೆದರು. ಆದರೂ ಭಾರತದ ಪ್ರತಿಭಾನ್ವಿತ ಬಾಕ್ಸರ್ ಗೆ ಕಂಚಿನ ಗೌರವ ದೊರೆತಿದೆ.
ಆಗಸ್ಟ್ 31ರ ಶುಕ್ರವಾರ ಏಷ್ಯನ್ ಗೇಮ್ಸ್ ಪುರುಷರ 75 ಕೆಜಿ ಮಿಡ್ಲ್ ವೇಟ್ ಬಾಕ್ಸಿಂಗ್ ಸೆಮಿಫೈನಲ್ ಸ್ಪರ್ಧೆಯಲ್ಲಿ ವಿಕಾಸ್ ಕೃಷ್ಣನ್ ಅವರು ವೈದ್ಯಕೀಯವಾಗಿ ಅನರ್ಹರೆಂದು ಘೋಷಿಸಲಾಯಿತು. ವಿಕಾಸ್ ಕಜಕೀಸ್ತಾನದ ಅಮಂಕಲ್ ಅಬಿಲ್ಖಾನ್ ಎದುರು ಗುದ್ದಾಡುವುದರಲ್ಲಿದ್ದರು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಸುದ್ದಿಮೂಲವೊಂದರ ಪ್ರಕಾರ ವಿಕಾಸ್ ಅವರು ಮೆಡಿಕಲಿ ಅನ್ ಫಿಟ್ ಎಂದು ಘೋಷಿಸಲು ಕಾರಣ ಎಡಗಣ್ಣು ಗುಡ್ಡೆಯ ಮೇಲಾಗಿದ್ದ ಗಾಯ. ಏಷ್ಯನ್ ಗೇಮ್ಸ್ ನ ಹಿಂದಿನ ಪಂದ್ಯಗಳಲ್ಲಿ ಪಾಲ್ಗೊಳ್ಳುವಾಗ ವಿಕಾಸ್ ಕಣ್ಣಿಗೆ ಗಾಯವಾಗಿತ್ತು. ಹೀಗಾಗಿ 26ರ ಹರೆಯದ ಕೃಷ್ಣನ್ ಅವರನ್ನು ಕ್ರೀಡಾಕೂಟದ ನಿಯಮಾವಳಿ ಪ್ರಕಾರ ಅನರ್ಹಗೊಳಿಸಲಾಯಿತು.
'ವಿಕಾಸ್ ಅವರ ಎಡಗಣ್ಣಿನ ರೆಟಿನಾ ಭಾಗದಲ್ಲಿ ಉರಿಯೂತವಿತ್ತು. ಹೀಗಿದ್ದು ವಿಕಾಸ್ ಅವರನ್ನು ಪಂದ್ಯಕ್ಕಿಳಿಸಿದರೆ ಅವರ ಕಣ್ಣು ತೀವ್ರ ಅಪಾಯಕ್ಕೀಡಾಗುವ ಸಂಭವವಿತ್ತು. ಆದ್ದರಿಂದ ಅವರನ್ನು ಪಂದ್ಯದಿಂದ ಅನರ್ಹಗೊಳಿಸಲಾಯಿತು. ಕೆಲವು ವಾರಗಳವರೆಗೆ ವಿಕಾಸ್ ವಿಶ್ರಾಂತಿ ಪಡೆಯಲಿದ್ದಾರೆ' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.