
ಹೊಸದಿಲ್ಲಿ, ಏಪ್ರಿಲ್ 29: ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನ ಅಂತಿಮ ದಿನವಾದ ಭಾನುವಾರ ಗ್ರೀಕೋ ರೋಮನ್ ಶೈಲಿಯ ಕುಸ್ತಿಯಲ್ಲಿ ಭಾರತದ ಹರ್ಪ್ರೀತ್ ಸಿಂಗ್ ಮತ್ತು ಜ್ಞಾನೇಂದ್ರ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದಾರೆ.
ಪರ್ಪ್ರೀತ್ ಸಿಂಗ್ ಪುರುಷರ 82 ಕೆಜಿ ವಿಭಾಗದಲ್ಲಿ ಮಿಂಚಿನ ಪ್ರದರ್ಶನ ನೀಡಿ ಫೈನಲ್ ತಲುಪಿದ್ದರು. ಆದರೆ, ಸ್ವರ್ಣ ಪದಕಕ್ಕಾಗಿ ನಡೆದ ಕಾಳಗದಲ್ಲಿ ಇರಾನ್ನ ಜಟ್ಟಿ ಸಯೀದ್ ಮೊರಾದ್ ಅಬ್ದವಾಲಿ ಎದುರು 0-8 ಅಂಕಗಳ ಸೋಲುಂಡರು. ಈ ಹಿಂದೆ ಸತತ ಎರಡು ಬಾರಿ ಕಂಚಿನ ಪದಕ ಗೆದ್ದಿದ್ದ ಹರ್ಪ್ರೀತ್, ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ತಮ್ಮ ಮೊದಲ ಬೆಳ್ಳಿ ಪದಕ ಗೆದ್ದಿದ್ದಾರೆ.
ಹರ್ಪ್ರೀತ್, ಫೈನಲ್ಗೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿ ಕಿರ್ಗಿಸ್ತಾನದ ಬುರ್ಗೊಬೀಶಲೇವ್ ಎದುರು ಮತ್ತು ಕ್ವಾರ್ಟರ್ಫೈನಲ್ಸ್ನಲ್ಲಿ ಚೀನಾದ ಹೈತಾವ್ ಕಿಯಾನ್ ಎದುರು 10-1 ಅಂಕಗಳ ಅಧಿಕಾರಯುತ ಜಯ ದಕ್ಕಿಸಿಕೊಂಡಿದ್ದರು.
"ಗೆಲುವಿಗಾಗಿ ನನ್ನ ಸಂಪೂರ್ಣ ಶ್ರಮ ಪಣಕ್ಕಿಟ್ಟೆ. ಆದರೆ, ಮಾಜಿ ವಿಶ್ವ ಚಾಂಪಿಯನ್ ಕುಸ್ತಿಪಟು ಎದುರು ಬಹಳ ಬಲಿಷ್ಠರಾಗಿದ್ದರು. ಆದರೂ ಬೇರೆ ಬಣ್ಣದ ಪದಕ ಸಿಕ್ಕಿರುವುದು ಸಂತಸ ನೀಡಿದೆ. ಭವಿಷ್ಯದಲ್ಲಿ ಭಾರತಕ್ಕೆ ಮತ್ತಷ್ಟು ಪದಕ ಗೆದ್ದುಕೊಡಬೇಕೆಂದು ಆಶಿಸುತ್ತೇನೆ,'' ಎಂದು ಹರ್ಪ್ರೀತ್ ಬೆಳ್ಳಿ ಗೆದ್ದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ ಪರುಷರ 60 ಕೆಜಿ ಗ್ರೋಕೊರೋಮನ್ ಶೈಲಿಯಲ್ಲಿ ಸೆಮಿಫೈನಲ್ ಹಂತದಲ್ಲಿ ಇಸ್ಲೊಮ್ಯೊನ್ ಬಖರ್ಮೊವ್ ಎದುರು 0-9 ಅಂಕಗಳಿಂದ ಸೋತ ಗ್ಯಾನೇಂದರ್, ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಇದಕ್ಕೂ ಮುನ್ನ ಕ್ವಾರ್ಟರ್ಫೈನಲ್ಸ್ನಲ್ಲಿ ಜಾರ್ಡನ್ಅಲಿ ಅಬೆದ್ ಅಲಿ ಅಬುಸೈಫ್ ಎದುರು ಗ್ಯಾನೇಂದ್ರ ಜಯ ದಾಖಲಿಸಿದ್ದರು.
ಒಟ್ಟಾರೆ ಆರು ದಿನಗಳ ಕಾಲ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಭಾರತದ ಜಟ್ಟಿಗಳು ಭರ್ಜರಿ ಪ್ರದರ್ಶನ ನೀಡಿದ್ದು, ಒಂದು ಚಿನ್ನ, 6 ಬೆಳ್ಳಿ ಮತ್ತು 9 ಕಂಚಿನ ಪದಕಗಳೊಂದಿಗೆ ಒಟ್ಟು 16 ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ಚಾಂಪಿಯನ್ಷಿಪ್ಸ್ನಲ್ಲಿ ಭಾರತದ ಒಟ್ಟು 30 ಕುಸ್ತಿಪಟುಗಳು ಪಾಲ್ಗೊಂಡಿದ್ದರು.