
ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನಾ ನಿರತ ರೈತರಿಗೆ ಭಾರತೀಯ ಹೆಚ್ಚಿನ ಕ್ರೀಡಾಪಟುಗಳಿಂದ ಬೆಂಬಲ ಲಭಿಸಿದೆ. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ರಸ್ಲರ್ ಕರ್ತರ್ ಸಿಂಗ್ ಮುಂದಾಳತ್ವದಲ್ಲಿ ಪಂಜಾಬ್ನ ಪ್ರಮುಖ ಕ್ರೀಡಾಪಟುಗಳು ಪ್ರಶಸ್ತಿಗಳನ್ನು ಹಿಂದಿರುಗಿಸುವುದಕ್ಕಾಗಿ ರಾಷ್ಟ್ರಪತಿ ಭವನಕ್ಕೆ ಹೋಗಿದ್ದಾರೆ.
ನರೇಂದ್ರ ಮೋದಿ ಸರ್ಕಾರ ತಂದಿರುವ 3 ಕೃಷಿಕಾಯ್ದೆಗಳು ರೈತ ವಿರೋಧಿಯಾಗಿವೆ. ಅವು ದುಡಿಯುವ ರೈತರ ಪಾಲಿಗೆ, ಕೃಷಿಗೆ ಮಾರಕವಾಗಿವೆ ಎಂದು ಹರ್ಯಾಣ, ಪಂಜಾಬ್, ಉತ್ತರಪ್ರದೇಶ ಹಾಗು ಇನ್ನಿತರ ರಾಜ್ಯಗಳ ರೈತರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಪ್ರಶಸ್ತಿ ವಿಜೇತ ಕ್ರೀಡಾಪಟುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿಗಳನ್ನು ವಾಪಸ್ ನೀಡಲು ರಾಷ್ಟ್ರಪತಿ ಭವನದತ್ತ ಸೋಮವಾರ (ಡಿಸೆಂಬರ್ 7) ಹೋಗಿರುವ ಪ್ರಶಸ್ತಿ ವಿಜೇತ ಕ್ರೀಡಾಪಟುಗಳಲ್ಲಿ ಒಟ್ಟಿಗೆ 35 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ಕ್ರೀಡಾಪಟುಗಳಿದ್ದಾರೆ. ಆದರೆ ಅವರನ್ನು ಪೊಲೀಸರು ದಾರಿ ಮಧ್ಯೆ ತಡೆದಿದ್ದಾರೆ.
1982ರಲ್ಲಿ ಕರ್ತರ್ ಸಿಂಗ್ಗೆ ಅರ್ಜುನ ಪ್ರಶಸ್ತಿ ನೀಡಲಾಗಿತ್ತು. 1987ರಲ್ಲಿ ಪ್ರದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಕರ್ತರ್ ಅಲ್ಲದೆ, ಒಲಿಂಪಿಕ್ ಚಿನ್ನದ ಪದಕ ವಿಜೇತ ಹಾಕಿ ಆಟಗಾರ ಗುರ್ಮೈಲ್ ಸಿಂಗ್, ಹಾಕಿ ಮಾಜಿ ನಾಯಕ ರಜ್ಬೀರ್ ಕೌರ್ ಸೇರಿ ಇನ್ನಿತರ ಒಟ್ಟು 35 ಪ್ರಶಸ್ತಿಗಳು ವಾಪಸ್ ಆಗುವುದರಲ್ಲಿವೆ.