ವಿಶ್ವದ ನಂ.3 ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ ಚಿರಾಗ್ ಶೆಟ್ಟಿ ಅವರು ರಾಷ್ಟ್ರಕ್ಕೆ ಪ್ರಶಸ್ತಿಗಳನ್ನು ಗೆಲ್ಲುವ ಕ್ರೀಡಾ ತಾರೆಗಳಿಗೆ ತಾರತಮ್ಯ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿದ್ದಾರೆ.
2024ರ ಟಿ20 ವಿಶ್ವಕಪ್ ಗೆದ್ದ ರೋಹಿತ್ ಶರ್ಮಾ ಸೇರಿದಂತೆ 4 ಮಹಾರಾಷ್ಟ್ರ ಕ್ರಿಕೆಟಿಗರನ್ನು ರಾಜ್ಯ ಸರ್ಕಾರವು ಗೌರವಿಸಿದೆ ಎಂದು 26 ವರ್ಷದ ಬ್ಯಾಡ್ಮಿಂಟನ್ ತಾರೆ ಹೈಲೈಟ್ ಮಾಡಿದ್ದು, 2022ರಲ್ಲಿ ಥಾಮಸ್ ಕಪ್ ವಿಜೇತ ಭಾರತೀಯ ಬ್ಯಾಡ್ಮಿಂಟನ್ ತಂಡದ ಭಾಗವಾಗಿದ್ದಕ್ಕಾಗಿ ಅವರನ್ನು ಗೌರವಿಸಲಾಗಿಲ್ಲ ಎಂದು ಬಹಿರಂಗಪಡಿಸಿದರು.

ಕ್ರಿಕೆಟಿಗರ ವಿರುದ್ಧ ನನಗೆ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದ ಚಿರಾಗ್ ಶೆಟ್ಟಿ, ಇತರ ಕ್ರೀಡೆಗಳಿಗೆ ಮಲತಾಯಿಯ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದರು.
ಗಮನಾರ್ಹವಾಗಿ, ಟಿ20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟಿಗರಿಗೆ ಮಹಾರಾಷ್ಟ್ರ ಸರ್ಕಾರ 11 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿತು.
ಜುಲೈ 5ರಂದು ಮುಂಬೈನ ಮಹಾರಾಷ್ಟ್ರ ವಿಧಾನ ಭವನದಲ್ಲಿ ರಾಜ್ಯದ ಕ್ರಿಕೆಟಿಗರನ್ನು ಅಭಿನಂದಿಸುವ ಮೊದಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ನಿವಾಸದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಸನ್ಮಾನಿಸಿದರು.

"ಬ್ಯಾಡ್ಮಿಂಟನ್ನಲ್ಲಿ ಥಾಮಸ್ ಕಪ್ ಕೂಡ ಕ್ರಿಕೆಟ್ನ ವಿಶ್ವಕಪ್ ಗೆಲ್ಲುವುದಕ್ಕೆ ಸಮಾನವಾಗಿದೆ. ಫೈನಲ್ನಲ್ಲಿ ಚಾಂಪಿಯನ್ ಇಂಡೋನೇಷ್ಯಾಕ್ಕೆ ಆಘಾತ ನೀಡಿ ಚೊಚ್ಚಲ ಪ್ರಶಸ್ತಿ ಗೆದ್ದ ಭಾರತೀಯ ಬ್ಯಾಡ್ಮಿಂಟನ್ ತಂಡದ ಭಾಗವಾಗಿದ್ದೇನೆ".
"ಭಾರತ ತಂಡದಲ್ಲಿ ನಾನೊಬ್ಬನೇ ಮಹಾರಾಷ್ಟ್ರದ ಆಟಗಾರನಾಗಿದ್ದೆ. ವಿಶ್ವಕಪ್ ವಿಜೇತ ಕ್ರಿಕೆಟ್ ತಾರೆಯರನ್ನು ಸರ್ಕಾರ ಗೌರವಿಸಿದಾಗ, ಅವರು ನನ್ನ ಪ್ರಯತ್ನಗಳನ್ನೂ ಗುರುತಿಸಬೇಕಿತ್ತು. ಸರ್ಕಾರವು ಎಲ್ಲ ಕ್ರೀಡೆಗಳನ್ನು ಸಮಾನವಾಗಿ ಪರಿಗಣಿಸಬೇಕು," ಎಂದು ಚಿರಾಗ್ ಶೆಟ್ಟಿ ಹೇಳಿದ್ದಾರೆ.
ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಬಾರ್ಬಡೋಸ್ನಿಂದ ಹಿಂದಿರುಗಿದ ನಂತರ, ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆತಿಥ್ಯ ವಹಿಸಿದ್ದರು.
ಗುರುವಾರ ರಾತ್ರಿ ವಾಂಖೆಡೆ ಸ್ಟೇಡಿಯಂನಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಭಾರತ ತಂಡಕ್ಕೆ 125 ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ಹಸ್ತಾಂತರಿಸುವ ಮೊದಲು, ಇಡೀ ಭಾರತ ತಂಡವು ಮುಂಬೈನಲ್ಲಿ ಓಪನ್-ಟಾಪ್ ಬಸ್ ಪರೇಡ್ ನಡೆಸಿತು.
"ಕ್ರಿಕೆಟ್ ವಿರುದ್ಧ ನನ್ನದೇನೂ ತಕರಾರಿಲ್ಲ. ಬ್ಯಾಡ್ಮಿಂಟನ್ ಆಟಗಾರರೆಲ್ಲರೂ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಟಿವಿಯಲ್ಲಿ ಲೈವ್ ಆಗಿ ವೀಕ್ಷಿಸಿ ಸಂಭ್ರಮದಿಂದ ಆಚರಿಸಿದ್ದೇವೆ. ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅದ್ಭುತ ಗೆಲುವಿನ ಬಗ್ಗೆ ನಮಗೆ ಸಂತೋಷ ಮತ್ತು ಹೆಮ್ಮೆ ಇದೆ," ಎಂದು ಚಿರಾಗ್ ಶೆಟ್ಟಿ ತಿಳಿಸಿದರು.
"ಅಲ್ಲದೆ, ನಾವು ಒಂದೆರಡು ವರ್ಷಗಳ ಹಿಂದೆ ಗಮನಾರ್ಹವಾದದ್ದನ್ನು ಸಾಧಿಸಿದ್ದೇವೆ. ಆದರೆ ರಾಜ್ಯ ಸರ್ಕಾರವು ಯಾವುದೇ ನಗದು ಬಹುಮಾನವನ್ನು ನೀಡಿದ್ದನ್ನು ಹೊರತುಪಡಿಸಿ, ನನ್ನನ್ನು ಸನ್ಮಾನಿಸಲಿಲ್ಲ. 2022ರ ಮೊದಲು, ಭಾರತೀಯ ಬ್ಯಾಡ್ಮಿಂಟನ್ ತಂಡವು ಎಂದಿಗೂ ಸೆಮಿಫೈನಲ್ ತಲುಪಿರಲಿಲ್ಲ. ಆದರೆ ನಾವು ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸಿದ್ದೇವೆ," ಎಂದು ಚಿರಾಗ್ ಶೆಟ್ಟಿ ಹೇಳಿದರು.
ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಯಶಸ್ವಿ ಜೋಡಿ ಭಾರತದ ಮೊದಲ ಥಾಮಸ್ ಕಪ್ ವಿಜಯೋತ್ಸವದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ಪುರುಷರ ಬ್ಯಾಡ್ಮಿಂಟನ್ ತಂಡದ ಕಿಡಂಬಿ ಶ್ರೀಕಾಂತ್, ಲಕ್ಷ್ಯ ಸೇನ್ ಮತ್ತು ಸಾತ್ವಿಕ್-ಚಿರಾಗ್ ತಮ್ಮ ತಮ್ಮ ಪಂದ್ಯಗಳನ್ನು ಗೆದ್ದುಕೊಳ್ಳುವುದರೊಂದಿಗೆ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಇಂಡೋನೇಷ್ಯಾ ತಂಡಕ್ಕೆ ಆಘಾತ ನೀಡಿದರು.
ಅಂದಿನಿಂದ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಬೇರೆ ಬೇರೆ ಟೂರ್ನಿಗಳಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ನಂತರ ಇವರಿಬ್ಬರು ಪುರುಷರ ಡಬಲ್ಸ್ನಲ್ಲಿ ನಂಬರ್ 1 ಸ್ಥಾನದಲ್ಲಿದ್ದರು. ಸಾತ್ವಿಕ್ ಮತ್ತು ಚಿರಾಗ್ ಜೋಡಿ ಪ್ಯಾರಿಸ್ ಒಲಿಂಪಿಕ್ ಪದಕ ಗೆಲ್ಲುವ ಭಾರತದ ಅತಿದೊಡ್ಡ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.