ಒಲಿಂಪಿಕ್ಸ್ನಲ್ಲಿ ಪದಕ ವಿಜೇತ ಬಜರಂಗ್ ಪುನಿಯಾ ಅವರ ಮೇಲೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿದೆ. ಇದಕ್ಕೆ ಬಜರಂಗ್ ಪುನಿಯಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದನ್ನು ಅವರು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ರಾಜಕೀಯ ಪ್ರೇರಿತ. ನನ್ನ ಮೇಲೆ ನಾಲ್ಕು ವರ್ಷಗಳ ಕಾಲ ಬ್ಯಾನ್ ಹೇರಿರುವುದು ಬಿಜೆಪಿ ಸರ್ಕಾರದ ಪಿತೂರಿ ಎಂದು ಟೀಕಿಸಿದ್ದಾರೆ.
ಬಜರಂಗ ಪುನಿಯಾ ತಮ್ಮ ಮೂತ್ರ ಸ್ಯಾಂಪಲ್ ನೀಡದಕ್ಕೆ ನಾಡಾ ಅವರನ್ನು ನಾಲ್ಕು ವರ್ಷಗಳ ಕಾಲ ಬ್ಯಾನ್ ಮಾಡಿತ್ತು. ಇದನ್ನು ಪ್ರಶ್ನಿಸಿ ಪುನಿಯಾ ಒಂದು ವಿಡಿಯೋ ಹಾಕಿದ್ದಾರೆ. ಇದರಲ್ಲಿ ಹಲವು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಸರ್ಕಾರ ಅವರ ಜೊತೆ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನು ಎಳೆ ಎಳೆಯಾಗಿ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಪುನಿಯಾ ಹಲವು ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಡೆಲ್ಲಿಯಲ್ಲಿ ನಾನು ಪ್ರತಿಭಟನೆ ನಡೆಸಿದಾಗಿನಿಂದಲೂ ನನ್ನ ಮೇಲೆ ಪಿತೂರಿ ನಡೆಯುತ್ತಿದೆ. ನನ್ನ ವೃತ್ತಿ ಜೀವನವನ್ನು ಕೊನೆಗೊಳಿಸಲು ಬಿಜೆಪಿ ಸರ್ಕಾರ ಹಾಗೂ ಭಾರತ ಕುಸ್ತಿ ಸಂಸ್ಥೆ ಪಿತೂರಿ ನಡೆಸುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

ದೇಶದಲ್ಲಿ ಮಹಿಳಾ ಕುಸ್ತಿ ಪಟುಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇ ತಪ್ಪಾ. ಇದಕ್ಕೆ ಇಂತಹ ದೊಡ್ಡ ಶಿಕ್ಷೆಯನ್ನು ನೀಡಲಾಗುತ್ತಿದೆಯಾ ಎಂಬ ಅರ್ಥದಲ್ಲೇ ಅವರು ಮಾತನಾಡಿದ್ದಾರೆ. ಇದು ನಿಜಕ್ಕೂ ಬಿಜೆಪಿ ಸರ್ಕಾರದ ಸಂಚು ಎಂದು ಪುನಿಯಾ ತಿಳಿಸಿದ್ದಾರೆ. ಪ್ರತಿಭಟನೆ ನಡೆಸಿದ್ದಕ್ಕಾಗಿ ಬಿಜೆಪಿ ನನ್ನ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುತ್ತಿದೆ ಎಂದು ಪುನಿಯಾ ಹೇಳಿದ್ದಾರೆ.
ನಾಡಾ ನನ್ನ ಮೇಲೆ ಹೇರಿರುವ ನಾಲ್ಕು ವರ್ಷಗಳ ನಿಷೇದವು ನನ್ನ ವಿರುದ್ಧದ ರಾಜಕೀಯ ಪಿತೂರಿ ಆಗಿದೆ. ಮಹಿಳಾ ಕುಸ್ತಿ ಪಟುಗಳ ವಿರುದ್ದ ಧ್ವನಿ ಎತ್ತಿದ್ದಕ್ಕಾಗಿ ನಾವು ಈ ರೀತಿ ಶೀಕ್ಷೆಯನ್ನು ಎದುರುಸಿತ್ತಿದ್ದೇವೆ. ನಾಡಾ ತಂಡ ಪರೀಕ್ಷೆಗೆಂದು ನನ್ನ ಬಳಿಗೆ ಬಂದಾಗ ಅವರಲ್ಲಿದ್ದ ಡೋಪ್ ಕಿಟ್ ಅವಧಿ ಮುಗಿದ (Date expired) ಆಗಿತ್ತು. ಇದು ಸಂಪೂರ್ಣ ನಾಡಾ ನಿರ್ಲಕ್ಷ್ಯವಾಗಿದೆ. ಒಬ್ಬ ಕ್ರೀಡಾ ಪಟುವನ್ನು ನೀವು ಡೋಪ್ ಪರೀಕ್ಷೆಗೆ ಒಳಪಡಿಸುತ್ತಿದ್ದರೆ ಆತನ ಸ್ಯಾಂಪಲ್ ಪಡೆಯುವುದು ಒಳ್ಳೆಯದು. ಅದಕ್ಕಾಗಿ ನೀವು ಬಳಿಸುವ ಕಿಟ್ ಸರಿಯಾಗಿರಬೇಕು. ಏಕೆಂದರೆ ನೀವು ಪಡೆಯುವ ಸ್ಯಾಂಪಲ್ ಹಾಗೂ ನೀವು ನೀಡುವ ವರದಿಯ ಮೇಲೆ ಕ್ರೀಡಾ ಪಟುವಿನ ಭವಿಷ್ಯ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪುನಿಯಾ, ನನ್ನನ್ನು ತಪ್ಪಿತಸ್ಥನಾಗಿ ಬಿಂಬಿಸಲು, ಬಿಜೆಪಿ ಸರ್ಕಾರದ ಸಂಚು ಇದಾಗಿದೆ. ಈ ಮೂಲಕ ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ಬಿಜೆಪಿ ಸರ್ಕಾರ ಮತ್ತು ಒಕ್ಕೂಟವು ಈ ತಂತ್ರವನ್ನು ಮಾಡಿದೆ. ಈ ನಿರ್ಧಾರವು ನ್ಯಾಯೋಚಿತವಲ್ಲ ಎಂದು ತಿಳಿಸಿದ್ದಾರೆ. ನನ್ನ ಮೇಲೆ ನಾಡಾ ಹೇರಿರುವ ನಿಷೇಧದಿಂದ ನಾವು ಹೆದರುವುದಿಲ್ಲ. ನಮ್ಮ ಹೋರಾಟವನ್ನು ನಾವು ಮುಂದುವರೆಸುತ್ತೇವೆ. ನನ್ನ ಕೊನೆಯ ಉಸಿರು ಇರುವವರೆಗೂ ನನ್ನ ಹೋರಾಟ ನಿರಂತರ ಎಂದು ತಿಳಿಸಿದ್ದಾರೆ.