ಭಾರತದ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ವಿನೇಶ್ ಪೋಗಟ್ ಅವರಿಗೆ 2023ರ ಏಷ್ಯನ್ ಗೇಮ್ಸ್ಗೆ ನೇರ ಪ್ರವೇಶ ನೀಡಿರುವ ಭಾರತೀಯ ಒಲಿಂಪಿಕ್ ಒಕ್ಕೂಟದ (ಐಒಎ) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶನಿವಾರ ಎತ್ತಿ ಹಿಡಿದಿದೆ.
ಬಜರಂಗ್ ಪುನಿಯಾ ಮತ್ತು ವಿನೇಶ್ ಪೋಗಟ್ಗೆ ಅಭ್ಯಾಸದ ಅವಶ್ಯಕತೆಯಿಲ್ಲದೆ ನೇರವಾಗಿ 2023ರ ಏಷ್ಯನ್ ಗೇಮ್ಸ್ಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆ ಮಾಡಿದ್ದ ಭಾರತೀಯ ಒಲಿಂಪಿಕ್ ಒಕ್ಕೂಟ ನಿರ್ಧಾರವನ್ನು ವಿರೋಧಿಸಿ, ಕುಸ್ತಿಪಟುಗಳಾದ ಅಂತಿಮ್ ಪಂಘಲ್ ಮತ್ತು ಸುಜೀತ್ ಕಲ್ಕಲ್ ಅವರು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.

ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರಿಗೆ ವಿನಾಯಿತಿ ನೀಡಿರುವುದನ್ನು ಅಂತಿಮ್ ಪಂಘಲ್ ಮತ್ತು ಸುಜೀತ್ ಕಲ್ಕಲ್ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಪೀಠ ವಜಾಗೊಳಿಸಿದೆ.
ಬುಧವಾರ, ಜುಲೈ 19ರಂದು ಕುಸ್ತಿಪಟು ಅಂತಿಮ್ ಪಂಘಲ್ ಅವರು ವಿಡಿಯೋ ಮೂಲಕ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು. ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಅವರು ಏಷ್ಯನ್ ಗೇಮ್ಸ್ 2023ಗೆ ನೇರವಾಗಿ ಪ್ರವೇಶಿಸಲು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಅವಕಾಶ ನೀಡಿರುವುದನ್ನು ಇವರು ಪ್ರಶ್ನಿಸಿದ್ದರು.
ವಿಡಿಯೋ ಸಂವಹನದಲ್ಲಿ ಮಾತನಾಡಿದ ಕುಸ್ತಿಪಟು ಸುಜೀತ್ ಕಲ್ಕಲ್, ಯಾವುದೇ ಟ್ರಯಲ್ಸ್ನಲ್ಲಿ ಭಾಗವಹಿಸದೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಜರಂಗ್ ಪುನಿಯಾಗೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಕುಸ್ತಿಪಟುಗಳಿಗೆ ಯಾವುದೇ ಟ್ರಯಲ್ಸ್ ರಹಿತ ವಿನಾಯಿತಿಗಳನ್ನು ನೀಡುವುದನ್ನು 19 ವರ್ಷದ ಅಂತಿಮ್ ಪಂಘಲ್ ಮತ್ತು 21 ವರ್ಷದ ಸುಜೀತ್ ಕಲ್ಕಲ್ ಇಬ್ಬರೂ ವಿರೋಧಿಸಿದ್ದು, ಎಲ್ಲರಿಗೂ ನ್ಯಾಯಯುತ ಮತ್ತು ಸಮಾನ ರೀತಿಯಲ್ಲಿ ಟ್ರಯಲ್ಸ್ ನಡೆಸುವ ಮಹತ್ವವನ್ನು ಒತ್ತಿ ಹೇಳಿದರು.
ಪಾರದರ್ಶಕತೆಗಾಗಿ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋದಲ್ಲಿ ದಾಖಲಿಸಬೇಕು ಎಂದು ಕುಸ್ತಿಪಟುಗಳಾದ ಅಂತಿಮ್ ಪಂಘಲ್ ಮತ್ತು ಸುಜೀತ್ ಕಲ್ಕಲ್ ಒತ್ತಾಯಿಸಿದ್ದರು.
ಇನ್ನು ಇದಕ್ಕೆ ಸಂಬಂಧಿಸಿದಂತೆ ಕುಸ್ತಿಪಟು ವಿಶಾಲ್ ಕಾಳಿರಾಮನ್, "ನಾನು ಕೂಡ 65 ಕೆಜಿಯೊಳಗಿನ ವಿಭಾಗದಲ್ಲಿ ಆಡುತ್ತೇನೆ. ಏಷ್ಯನ್ ಗೇಮ್ಸ್ಗೆ ಬಜರಂಗ್ ಪುನಿಯಾಗೆ ಯಾವುದೇ ಟ್ರಯಲ್ಸ್ ಇಲ್ಲದೇ ನೇರ ಪ್ರವೇಶ ನೀಡಲಾಗಿದೆ".
"ಅವರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ, ನಾವು ಅಭ್ಯಾಸ ಮಾಡುತ್ತಿದ್ದೆವು. ನಾವು ಟ್ರಯಲ್ಸ್ಗಾಗಿ ಮನವಿ ಮಾಡುತ್ತೇವೆ. ಅವರು ಟ್ರಯಲ್ಸ್ ಮಾಡಬೇಕು, ಇಲ್ಲವಾದರೆ ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ. 15 ವರ್ಷಗಳಿಂದ ನಾವು ಅಭ್ಯಾಸ ಮಾಡುತ್ತಿದ್ದೇವೆ. ಬಜರಂಗ್ ಪುನಿಯಾ ಏಷ್ಯನ್ ಗೇಮ್ಸ್ನಲ್ಲಿ ಆಡುವುದಿಲ್ಲ ಎಂದು ನಿರಾಕರಿಸಿದರೆ ಮಾತ್ರ, ಬೇರೆಯವರಿಗೆ ಅವಕಾಶ ಸಿಗುತ್ತದೆ," ಎಂದು ವಿಶಾಲ್ ಕಾಳಿರಾಮನ್ ಹೇಳಿದ್ದಾರೆ.