
ನವದೆಹಲಿ, ಸೆಪ್ಟೆಂಬರ್ 22: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪರಿಗಣಿಸದೆ ತನ್ನನ್ನು ನಿರ್ಲಕ್ಷಿಸಿಕ್ಕೆ ಅಸಮಾಧಾನಗೊಂಡಿದ್ದ ಭಾರತದ ಸ್ಟಾರ್ ರಸ್ಲರ್ ಬಜರಂಗ್ ಪೂನಿಯಾ ಅವರು ಕ್ರೀಡಾಪ್ರಾಧಿಕಾರದ ವಿರುದ್ಧ ಕೋರ್ಟ್ ಬಾಗಿಲು ತಟ್ಟುವುದಾಗಿ ಹೇಳಿದ್ದರು. ಆದರೆ ತನ್ನ ಮೆಂಟರ್ ಯೋಗೇಶ್ವರ್ ದತ್ ಸಲಹೆ ಕೇಳಿದ ಬಳಿಕ ಬಜರಂಗ್ ದೂರಿನ ವಿಚಾರ ಕೈ ಬಿಟ್ಟಿದ್ದಾರೆ.
ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ತನ್ನನ್ನು ಪರಿಗಣಿಸದಿದ್ದಿದ್ದಕ್ಕೆ ಬಜರಂಗ್ ಭಾರತೀಯ ಕ್ರೀಡಾ ಸಚಿವಾಲಯದ ಬಗ್ಗೆ ಕಿಡಿ ಕಾರಿದ್ದರು. 24ರ ಹರೆಯದ ಬಜರಂಗ್ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ಮತ್ತು ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂನಿಯಾ ಅವರ ಮೆಂಟರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಸ್ಲರ್ ಯೋಗೇಶ್ವರ್ ದತ್, 'ಈ ವರ್ಷದ ಖೇಲ್ ರತ್ನ ಪ್ರಶಸ್ತಿಗೆ ಅರ್ಹರಾಗಿದ್ದರೂ ಬಜರಂಗ್ ಗೆ ಅನ್ಯಾಯವಾಗಿದೆ. ಕ್ರೀಡಾ ಸಚಿವರನ್ನು ನಾವಿಬ್ಬರೂ ಭೇಟಿಯಾಗಿದ್ದೇವೆ. ಸಚಿವರು ಪ್ರಶಸ್ತಿಯ ಆಯ್ಕೆ ಸಮಿತಿ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ' ಎಂದರು.
'ಪ್ರಶಸ್ತಿ ವಿಚಾರದಲ್ಲಿ ಬೇಸರಗೊಂಡು ಬಜರಂಗ್ ಕೋರ್ಟ್ ಮೊರೆ ಹೋಗುವುದರಲ್ಲಿದ್ದರು. ಆದರೆ ನಾನು ಅವರಿಗೆ ಕೋರ್ಟ್ ಗೆ ಹೋಗದಂತೆ ತಿಳಿಸಿದ್ದೇನೆ. ಬದಲಿಗೆ ಮುಂಬರಲಿರುವ ವರ್ಲ್ಡ್ ಚಾಂಪಿಯನ್ ಶಿಪ್ ಗೆ ತಯಾರಿಯತ್ತ ಗಮನ ಹರಿಸಲು ಸಲಹೆ ನೀಡಿದ್ದೇನೆ. ನನ್ನ ಸಲಹೆಯನ್ನು ಬಜರಂಗ್ ಸ್ವೀಕರಿಸಿದ್ದಾರೆ' ಎಂದು ದತ್ ತಿಳಿಸಿದರು.