ಪ್ರಾಯೋಜಕತ್ವ ಒಪ್ಪಂದದಂತೆ ತನಗೆ 158 ಕೋಟಿ ರೂಪಾಯಿಗಳನ್ನು ಪಾವತಿಸಲು ವಿಫಲವಾಗಿರುವ ಬೈಜುಸ್ ಶೈಕ್ಷಣಿಕ ತಂತ್ರಜ್ಞಾನ ಕಂಪನಿ ವಿರುದ್ಧ ಕಾರ್ಪೊರೇಟ್ ದಿವಾಳಿತನ ಪ್ರಕ್ರಿಯೆ ಆರಂಭಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೆಂಗಳೂರಿನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್ಸಿಎಲ್ಟಿ) ಅರ್ಜಿ ಸಲ್ಲಿಸಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಲ್ಲಿಸಿದ ಅರ್ಜಿಯ ಮೇರೆಗೆ ದಿವಾಳಿತನ ಟ್ರಿಬ್ಯೂನಲ್ ಎನ್ಸಿಎಲ್ಟಿ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ಗೆ ನೋಟಿಸ್ ಜಾರಿ ಮಾಡಿದೆ.
ನವೆಂಬರ್ 28ರಂದು ನ್ಯಾಯಾಂಗ ಸದಸ್ಯ ಕೆ ಬಿಶ್ವಾಲ್ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರಿದ್ದ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಜುಸ್ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಮೊತ್ತ ಹೊರತುಪಡಿಸಿ 158 ಕೋಟಿ ರೂಪಾಯಿಗಳನ್ನು ಪಾವತಿಸುವ ಬಗ್ಗೆ ಬೈಜುಸ್ಗೆ ಈ ವರ್ಷದ ಜನವರಿ 6ರಂದು ನೋಟಿಸ್ ಕಳುಹಿಸಲಾಗಿದೆ ಎಂದು ನ್ಯಾಯಮಂಡಳಿಗೆ ಬಿಸಿಸಿಐ ತಿಳಿಸಿತು.
ಈ ಹಿನ್ನೆಲೆಯಲ್ಲಿ ಬೈಜುಸ್ಗೆ ನೋಟಿಸ್ ನೀಡಿದ ನ್ಯಾಯಮಂಡಳಿ, ಇನ್ನೆರಡು ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕಂಪನಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 22ರಂದು ನಡೆಯಲಿದೆ.
ಎನ್ಸಿಎಲ್ಟಿ ಆದೇಶದಲ್ಲಿ, "ಪ್ರತಿವಾದಿಗಳಿಗೆ (ಬೈಜುಸ್) ಉತ್ತರವನ್ನು ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗುತ್ತದೆ ಮತ್ತು ಅದರ ನಂತರ ಒಂದು ವಾರದ ನಂತರ ಅರ್ಜಿದಾರರಿಗೆ (ಬಿಸಿಸಿಐ) ಯಾವುದಾದರೂ ದೂರುಗಳಿದ್ದರೆ, ಪ್ರತಿಯನ್ನು ಸರಿಯಾಗಿ ಸಲ್ಲಿಸಿದ ನಂತರ ಮರುಪರಿಶೀಲನೆಯನ್ನು ಸಲ್ಲಿಸಲು ನೀಡಲಾಗುತ್ತದೆ," ಎಂದು ಹೇಳಿದೆ.

ವರದಿಗಳ ಪ್ರಕಾರ, ಭಾರತೀಯ ಕ್ರಿಕೆಟ್ ತಂಡದ ಜರ್ಸಿಗಳನ್ನು ಪ್ರಾಯೋಜಿಸುವ ಒಪ್ಪಂದಕ್ಕೆ ಸಂಬಂಧಿಸಿದಂತೆ ಬೈಜುಸ್ ಕಂಪನಿ ಬಿಸಿಸಿಐಗೆ ಬಾಕಿ ಮೊತ್ತ ಪಾವತಿಸಿರಲಿಲ್ಲ.
ಮೊಬೈಲ್ ಫೋನ್ ತಯಾರಕ ಕಂಪನಿ ಒಪ್ಪೋ (OPPO)ದಿಂದ ಕ್ರಿಕೆಟ್ ತಂಡದ ಜರ್ಸಿಗಳನ್ನು ಪ್ರಾಯೋಜಿಸುವ ಜವಾಬ್ದಾರಿಯನ್ನು ಹಿಂಪಡೆದಿದ್ದ ಬಿಸಿಸಿಐ, ಬೈಜುಸ್ ಜೊತೆ 2019ರಲ್ಲಿ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದ 2022ರಲ್ಲೇ ಕೊನೆಗೊಂಡರೂ ಅದನ್ನು 2023ಕ್ಕೆ ವಿಸ್ತರಿಸಲಾಗಿತ್ತು.
ಬಿಸಿಸಿಐ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ವಿಶ್ವ ಫುಟ್ಬಾಲ್ ಸಂಸ್ಥೆ (ಫಿಫಾ) ಜೊತೆಗೂ ತಾನು ಪ್ರಾಯೋಜಕತ್ವ ಒಪ್ಪಂದ ನವೀಕರಿಸುವುದಿಲ್ಲ ಎಂದು ಹಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಬೈಜುಸ್ ಕಳೆದ ಜನವರಿಯಲ್ಲಿ ಘೋಷಿಸಿತ್ತು.
ತೀರಾ ಈಚೆಗೆ ಎನ್ಸಿಎಲ್ಟಿಯಲ್ಲಿರುವ ದಿವಾಳಿತನ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಬೈಜುಸ್ ಬಿಸಿಸಿಐನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.