2022ರ ಡಿಸೆಂಬರ್ 30ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭಾರತ ತಂಡದ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್, ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಅವರ ಚೇತರಿಕೆ ಕಂಡು ಭಾರತೀಯ ಅಭಿಮಾನಿಗಳು ಖುಷಿಗೊಂಡಿದ್ದಾರೆ.
ಚಾಂಪಿಯನ್ ಬ್ಯಾಟರ್ನ ಚೇತರಿಕೆಯ ವೇಗ ನೋಡಿ ಆಶ್ಚರ್ಯ ವ್ಯಕ್ತಪಡಿಸಿರುವ ಬಿಸಿಸಿಐ, 2023ರ ಏಕದಿನ ವಿಶ್ವಕಪ್ಗೆ ರಿಷಭ್ ಪಂತ್ರನ್ನು ಫಿಟ್ಗೊಳಿಸುವ ಪ್ರಯತ್ನವಾಗಿ, ಎನ್ಸಿಎನಲ್ಲಿ ಅವರ ಪುನರ್ವಸತಿಯನ್ನು ವೇಗವಾಗಿ ಟ್ರ್ಯಾಕ್ ಮಾಡಲು ಯೋಜಿಸುತ್ತಿದೆ.

ರಿಷಭ್ ಪಂತ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಸಹ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಅವರೊಂದಿಗೆ ತರಬೇತಿ ಮುಂದುವರಿಸಿದ್ದಾರೆ.
ಇತ್ತೀಚೆಗೆ ವ್ಯಾಯಾಮ ಮತ್ತು ಯಾರ ಸಹಾಯವಿಲ್ಲದೆ ಮೆಟ್ಟಿಲು ಹತ್ತುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಫಿಸಿಯೋ ಎಸ್ ರಜನಿಕಾಂತ್ ಪ್ರಕಾರ, ಯುವ ಬ್ಯಾಟರ್ ಹೆಚ್ಚಿನ ನೋವುರಹಿತವಾಗಿದ್ದರೂ, ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕೆಲವು ಸಮಯ ಹಿಡಿಯಲಿದೆ ಎಂದಿದ್ದಾರೆ.
ಕಾರು ಅಪಘಾತದ ನಂತರ ರಿಷಭ್ ಪಂತ್ ಹಲವು ಗಾಯಗಳಿಗೆ ಒಳಗಾದರು ಮತ್ತು ಹೀಗಾಗಿ 2023ರಲ್ಲಿ ಸಂಪೂರ್ಣ ಕ್ರಿಕೆಟ್ ಆಟವನ್ನು ಕಳೆದುಕೊಳ್ಳುವ ನಿರೀಕ್ಷೆಯಿತ್ತು.

ಇದೇ ವೇಳೆ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಯನ್ನು ತಪ್ಪಿಸಿಕೊಂಡರು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಿಂದಲೂ ಹೊರಗುಳಿಯಬೇಕಾಯಿತು.
ಇದೀಗ ರಿಷಭ್ ಪಂತ್ ಅವರ ಚೇತರಿಕೆಯ ವೇಗ ಮುಂಬರುವ ಏಕದಿನ ವಿಶ್ವಕಪ್ ವೇಳೆಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭರವಸೆಯ ಬೆಳಕೊಂದು ಮೂಡಿದಂತಾಗಿದ್ದು, ಸಂಪೂರ್ಣ ಫಿಟ್ ಆದರೆ ಮೈದಾನಕ್ಕಿಳಿಯುವ ಆಸೆಯೊಂದು ಚಿಗುರಬಹುದು.
ಐಪಿಎಲ್ 2023ರ ಹೀನಾಯ ಅಭಿಯಾನ ಕಂಡ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ನಾಯಕ ರಿಷಭ್ ಪಂತ್ರನ್ನು ತುಂಬಾ ಮಿಸ್ ಮಾಡಿಕೊಂಡಿತು. ಅಷ್ಟೇ ಅಲ್ಲದೆ, ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಆಯ್ಕೆಯಾಗಿದ್ದ ರಿಷಭ್ ಪಂತ್ ಇರಬೇಕಿತ್ತು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು.

ಇದೀಗ ರಿಷಭ್ ಪಂತ್ ಅವರ ಚೇತರಿಕೆ ವೇಗವನ್ನು ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಎನ್ಸಿಎನಲ್ಲಿ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿರುವ ಯುವ ಕ್ರಿಕೆಟಿಗರೊಂದಿಗೆ ರಿಷಭ್ ಪಂತ್ ಸಮಯ ಕಳೆಯುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಬೆನ್ನು ನೋವಿಗೆ ಒಳಗಾಗಿ, ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ, ಐಪಿಎಲ್ 2023 ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಿಂದ ಹೊರಗುಳಿದಿರುವ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರು ಎನ್ಸಿಎಯಲ್ಲಿ ತಮ್ಮ ತರಬೇತಿಯನ್ನು ಮುಂದುವರಿಸಿದ್ದಾರೆ. ಬುಮ್ರಾ ಕೂಡ ಆಗಸ್ಟ್-ಸೆಪ್ಟೆಂಬರ್ನಲ್ಲಿ ನಡೆಯಲಿರುವ 2023ರ ಏಷ್ಯಾ ಕಪ್ಗೆ ಫಿಟ್ ಆಗುವ ನಿರೀಕ್ಷೆಯಿದೆ.
ಜಸ್ಪ್ರೀತ್ ಬುಮ್ರಾ ಹೊರತಾಗಿ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಬೆನ್ನುನೋವಿಗೆ ಒಳಗಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದೆರಡು ದಿನಗಳಿಂದ ಕೆಎಲ್ ರಾಹುಲ್ ಕೂಡ ಎನ್ಸಿಎ ಶಿಬಿರ ಸೇರಿದ್ದಾರೆ. ಏಷ್ಯಾ ಕಪ್ ಪಂದ್ಯಾವಳಿಯ 16ನೇ ಆವೃತ್ತಿಗೆ ಮುಂಚಿತವಾಗಿ ಚೇತರಿಕೆ ಕಂಡು ಭಾರತ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ.