T20 World Cup 2026: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ಟ್ರೋಫಿ ಮುಡಿಗೇರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತವಾಗಿ ಎರಡು ಬಾರಿ ಪ್ರಶಸ್ತಿ ಉಳಿಸಿಕೊಂಡ ಮತ್ತು ಒಟ್ಟಾರೆ ಮೂರು ಬಾರಿ ಚಾಂಪಿಯನ್ ಆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಟೀಂ ಇಂಡಿಯಾಗೆ ಬಿಸಿಸಿಐ ಒಂದಲ್ಲ.. ಎರಡಲ್ಲ ಬರೋಬ್ಬರಿ 131 ಕೋಟಿ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿದೆ.
ಮೂರನೇ ಬಾರಿ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ತಂಡಕ್ಕೆ ಬಿಸಿಸಿಐ ಮಂಗಳವಾರ (ಮಾರ್ಚ್ 10) 131 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಈ ಹಣವನ್ನು ತಂಡದ 15 ಆಟಗಾರರು, ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದ ತರಬೇತುದಾರರ ತಂಡ ಮತ್ತು ಇತರ ಸಹಾಯಕ ಸಿಬ್ಬಂದಿಗೆ ಹಂಚಲಾಗುವುದು. ಇನ್ನೂ ಈ ಐತಿಹಾಸಿಕ ಜಯವು ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಒಲಿದುಬಂದಿದೆ.

ಮೂಲಗಳ ಪ್ರಕಾರ, ಬಹುಮಾನದ ಹಣದಲ್ಲಿ ಬಹುಪಾಲು ಆಟಗಾರರಿಗೆ ಸಿಗುವುದು ಖಚಿತವಾಗಿದ್ದು, ಸಹಾಯಕ ಸಿಬ್ಬಂದಿಯ ಮೊತ್ತವನ್ನು ಅವರ ಶ್ರೇಣಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಈ ಮೊತ್ತವು 2024ರಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ನೀಡಲಾಗಿದ್ದ ₹125 ಕೋಟಿಗಿಂತ ₹6 ಕೋಟಿ ಅಧಿಕವಾಗಿದೆ ಎಂದು ತಿಳಿದುಬಂದಿದೆ.
"ಈ ಐತಿಹಾಸಿಕ ಸಾಧನೆಗಾಗಿ ಮಂಡಳಿತ ಮಂಡಳಿಯು ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಆಯ್ಕೆಗಾರರನ್ನು ಮತ್ತೊಮ್ಮೆ ಅಭಿನಂದಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಅವರು ಸತತ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತದೆ," ಅಂತಾ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಸೋಲಿಸುವ ಮೂಲಕ ಭಾರತವು ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿಹಿಡಿಯಿತು. ಈ ಮೂಲಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಲ್ಲದೆ, ಐಸಿಸಿ ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪ್ರಶಸ್ತಿಯನ್ನು ಸತತವಾಗಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಈ ಗೆಲುವಿನೊಂದಿಗೆ, ಭಾರತವು ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಮೂರು ಬಾರಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಮಾದರಿಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡು ಗಮನ ಸೆಳೆದಿದೆ.
* 2007
* 2024
* 2026
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರಕಾರ, ಈ ₹131 ಕೋಟಿ ಮೊತ್ತವನ್ನು ವಿಶ್ವಕಪ್ ತಂಡದಲ್ಲಿದ್ದ 15 ಆಟಗಾರರು, ಮುಖ್ಯ ತರಬೇತುದಾರ ಗೌತಮ್ ಗಂಭೀರ್ ನೇತೃತ್ವದ ತರಬೇತುದಾರರ ತಂಡ ಮತ್ತು ಇತರ ಸಹಾಯಕ ಸಿಬ್ಬಂದಿಗೆ ಹಂಚಲಾಗುವುದು. ಮೂಲಗಳ ಪ್ರಕಾರ, ಆಟಗಾರರಿಗೆ ಬಹುಪಾಲು ಹಣ ಸಿಗಲಿದ್ದು, ಪ್ರತಿ ಆಟಗಾರನಿಗೆ ಸುಮಾರು ₹6 ಕೋಟಿ ಸಿಗುವ ಸಾಧ್ಯತೆಯಿದೆ. ಉಳಿದ ಮೊತ್ತವನ್ನು ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯ ಶ್ರೇಣಿಗೆ ಅನುಗುಣವಾಗಿ ವಿತಣೆ ಮಾಡಲಾಗುತ್ತದೆ.
ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟಾಸ್ ಸೋತು ಭಾರತ ಮೊದಲು ಬ್ಯಾಟಿಂಗ್ ಮಾಡಿ 255/5 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಸಂಜು ಸ್ಯಾಮ್ಸನ್ 89 ರನ್ ಅಭಿಷೇಕ್ ಶರ್ಮಾ 52 ರನ್ ಸಿಡಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಬೌಲಿಂಗ್ನಲ್ಲಿ ಮಿಂಚಿದ ಜಸ್ಪ್ರಿತ್ ಬುಮ್ರಾ 4 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 3 ವಿಕೆಟ್ ಕಬಳಿಸಿ ಕಿವೀಸ್ ಪಡೆಯನ್ನು 159 ರನ್ಗಳಿಗೆ ಕಟ್ಟಿಹಾಕಿದರು. ಈ ಮೂಲಕ ಭಾರತ ಮತ್ತೊಮ್ಮೆ ಚಾಂಪಿಯನ್ ಆಯಿತು. ಇನ್ನೂ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅವರು, "ತಂಡದ ಪ್ರದರ್ಶನವನ್ನು ಶ್ಲಾಘಿಸಿದ್ದು, ಭಾರತೀಯ ಕ್ರಿಕೆಟ್ ಈಗ ವಿಶ್ವಮಟ್ಟದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದೆ," ಎಂದು ಬಣ್ಣಿಸಿದ್ದಾರೆ.