ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ, ಸೆಪ್ಟೆಂಬರ್ 11ರಂದು ಹಮ್ಮಿಕೊಂಡಿರುವ ಬೆಂಗಳೂರು ಬಂದ್ ಬಿಸಿ ಇದೀಗ ಭಾರತ ತಂಡದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಗೂ ತಟ್ಟಿದೆ.
ಕ್ಯಾಬ್ ಮಾಲೀಕರು ಮತ್ತು ಚಾಲಕರ ಮುಷ್ಕರದ ಕಾರಣದಿಂದಾಗಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ಬಾಡಿಗೆ ಕ್ಯಾಬ್ ವ್ಯವಸ್ಥೆ ಇಲ್ಲದಾಗಿದೆ.

ಹೀಗಾಗಿ ಕ್ಯಾಬ್ ಸಿಗದೆ ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ನಲ್ಲಿ ಪ್ರಯಾಣ ಮಾಡಿ ಮನೆಗೆ ತಲುಪಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಅನಿಲ್ ಕುಂಬ್ಳೆ ಗಮನ ಸೆಳೆದಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟ್ಟರ್)ನಲ್ಲಿ ಪೋಸ್ಟ್ ಮಾಡಿರುವ ಕನ್ನಡಿಗ ಅನಿಲ್ ಕುಂಬ್ಳೆ, ""ಇಂದು ವಿಮಾನ ನಿಲ್ದಾಣದಿಂದ ಮನೆಗೆ ಬರಲು ಬಿಎಂಟಿಸಿ ಬಸ್ ಸೇವೆಯನ್ನು ಬಳಸಿಕೊಂಡೆ,'' ಎಂದು ಬರೆದುಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಸರಳ ನಡೆಗೆ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಅನಿಲ್ ಕುಂಬ್ಳೆ ಅವರು ಭಾರತ ತಂಡದ ಪರ 132 ಟೆಸ್ಟ್ ಆಡಿದ್ದು, ಈ ಮೂಲಕ 619 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದಾರೆ. ಇನ್ನು 35 ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ.
ಅಲ್ಲದೆ 271 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಅನಿಲ್ ಕುಂಬ್ಳೆ 30.89ರ ಸರಾಸರಿಯಲ್ಲಿ 337 ವಿಕೆಟ್ ಪಡೆದಿದ್ದಾರೆ.
ಬೆಂಗಳೂರು ಬಂದ್; ಪರದಾಡಿದ ವಿಮಾನ ಪ್ರಯಾಣಿಕರು
ಬೆಂಗಳೂರು ಬಂದ್ ಕರೆಯಿಂದಾಗಿ ಶಾಲಾ-ಕಾಲೇಜಿಗೆ ಸೇವೆ ನೀಡುತ್ತಿರುವ ಬಸ್ಗಳು ಸ್ಥಗಿತಗೊಂಡಿವೆ. ಬೇರೆ ನಗರ ಮತ್ತು ಇತರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವವರು ಬಿಎಂಟಿಸಿ ಅಥವಾ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಎಲ್ಲಾ ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರು ಮತ್ತು ಮಾಲೀಕರು ಬಹುತೇಕ ಬಂದ್ನಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ, ಬಿಎಂಟಿಸಿಯ ವಾಯುವಜ್ರ ಬಸ್ ಅಥವಾ ದೇವನಹಳ್ಳಿ ರೈಲು ನಿಲ್ದಾಣದಿಂದ ಬೆಂಗಳೂರಿಗೆ ತಲುಪಬೇಕಿದೆ. ಇದರಿಂದ ಬಸ್ಗಳಲ್ಲಿ ನೂಕುನುಗ್ಗಲಿನಲ್ಲೇ ಸಂಚರಿಸಬೇಕಾಗಿರುವುದು ಅನಿವಾರ್ಯವಾಗಿದೆ.