ಬೆಂಗಳೂರು ಕಂಬಳ ಸಂಘಟಕರು ಮುಖ್ಯ ಅತಿಥಿ ಪಟ್ಟಿಯಿಂದ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೇಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ಹೆಸರನ್ನು ಕೈಬಿಡಲು ನಿರ್ಧರಿಸಿದ್ದಾರೆ.
ನವೆಂಬರ್ 25 ಹಾಗೂ 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾರತೀಯ ಕುಸ್ತಿ ಫೇಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರು ಆಗಮಿಸಬೇಕಾಗಿತ್ತು. ಆದರೆ ದೊಡ್ಡ ಮಟ್ಟದ ವಿರೋಧ ಕೇಳಿ ಬಂದ ನಂತರ, ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಿಂದ ಕೈಬಿಡಲಾಗಿದೆ.

ಭಾನುವಾರದಂದು ಬೆಂಗಳೂರು ಕಂಬಳದ ಸಭಾ ಕಾರ್ಯಕ್ರಮಕ್ಕೆ ಉತ್ತರಪ್ರದೇಶದ ಕೈಸರ್ ಗಂಜ್ ಕ್ಷೇತ್ರದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಆಹ್ವಾನಿಸಲಾಗಿತ್ತು, ಸದ್ಯ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಕಾರಣ, ಅವರ ಆಹ್ವಾನಕ್ಕೆ ಭಾರೀ ವಿರೋಧಗಳು ವ್ಯಕ್ತವಾಗಿದ್ದವು.
ಇತ್ತೀಚಿಗೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ದೇಶಾದ್ಯಂತ ಸದ್ದು ಮಾಡಿತ್ತು. ಹೀಗಾಗಿ ಬ್ರಿಜ್ ಭೂಷಣ್ ಅವರಿಗೆ ಬೆಂಗಳೂರಿನಲ್ಲಿ ನಡೆಯುವ ಕಂಬಳ ಸ್ಪರ್ಧೆಗೆ ಆಹ್ವಾನ ನೀಡಬಾರದು ಎನ್ನುವ ಒತ್ತಾಯ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಂಘಟಕರು ಹೆಸರು ಕೈಬಿಡುವ ನಿರ್ಧಾರವನ್ನು ಕೈಗೊಂಡಿದ್ದಾರೆ.

ನವೆಂಬರ್ 25ರಂದು ಬೆಂಗಳೂರಿಗೆ ಆಗಮಿಸಲಿದ್ದ ಬ್ರಿಜ್ ಭೂಷಣ್ ಸಿಂಗ್, ಸ್ಥಳೀಯ ಕುಸ್ತಿಪಟುಗಳನ್ನು ಗೌರವಿಸಬೇಕಾಗಿತ್ತು. ಕರ್ನಾಟಕದ ಕುಸ್ತಿಪಟುಗಳು ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಅಭಿನಂದನಾ ಸಮಾರಂಭದಲ್ಲಿ ಕುಸ್ತಿಪಟುಗಳನ್ನು ಬ್ರಿಜ್ ಭೂಷಣ್ ಸಿಂಗ್ ಪಾಲ್ಗೊಳ್ಳಬೇಕಿತ್ತು.
ಇದಕ್ಕೂ ಮುನ್ನ ಸಿದ್ದಿ ಸಮುದಾಯದ ಮನವಿ ಮೇರೆಗೆ ಬ್ರಿಜ್ ಭೂಷಣ್ ಸಿಂಗ್ ಅವರಿಗೆ ಆಮಂತ್ರಣ ಪತ್ರಿಕೆ ಕೂಡ ಕಳುಹಿಸಲಾಗಿತ್ತು. ಆದರೆ ಈ ಆಹ್ವಾನಕ್ಕೆ ತಾವು ಆಗಮಿಸುವ ಬಗ್ಗೆ ಬ್ರಿಜ್ ಭೂಷಣ್ ಸಿಂಗ್ ಇನ್ನೂ ಖಚಿತಪಡಿಸಿರಲಿಲ್ಲ.
ಕಂಬಳ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ವಿರೋಧ ಮತ್ತು ಒತ್ತಡಗಳ ನಂತರ, ಆಮಂತ್ರಣ ಪತ್ರಿಕೆಯಿಂದ ಬ್ರಿಜ್ ಭೂಷಣ್ ಸಿಂಗ್ ಹೆಸರನ್ನು ಕೈಬಿಡಲು ಸಂಘಟನಾ ಸಮಿತಿ ನಿರ್ಧರಿಸಿದೆ.