ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣಯ್ ಡೆನ್ಮಾರ್ಕ್ನ ಕೋಪನ್ಹೇಗನ್ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ಶಿಪ್ನ ಪುರುಷರ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಜಯ ಸಾಧಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ನಲ್ಲಿ ಎಚ್ಎಸ್ ಪ್ರಣಯ್ ವಿಶ್ವ ನಂ.1 ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಸೋಲಿಸಿದರು. 3 ಗೇಮ್ಗಳಲ್ಲಿ ರೋಚಕ ಪಂದ್ಯ ಗೆದ್ದ ಪ್ರಣಯ್ 13-21, 21-15, 21-16 ರಿಂದ ಭರ್ಜರಿ ಜಯ ಸಾಧಿಸಿದರು. ಇದರೊಂದಿಗೆ ಪ್ರಣಯ್ 2023ರ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ಖಚಿತ ಪಡಿಸಿದರು.

ಬ್ಯಾಡ್ಮಿಂಟನ್ನಲ್ಲಿ, ವಿಶ್ವ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ನಲ್ಲಿ ಪ್ರವೇಶ ಪಡೆದರೆ ಸಾಕು ಒಂದು ಪದಕ ಖಚಿತ. ಈ ಚಾಂಪಿಯನ್ ಶಿಪ್ನಲ್ಲಿ ಇಬ್ಬರಿಗೆ ಕಂಚಿನ ಪದಕಗಳ್ನು ನೀಡಲಾಗುತ್ತದೆ. ಹಾಗಾಗಿಯೇ ಸೆಮಿಫೈನಲ್ ತಲುಪಿದ ಬಳಿಕ ಪದಕ ಖಚಿತವಾಗಿದೆ.
ಪ್ರಣಯ್ ಕ್ವಾರ್ಟರ್ ಫೈನಲ್ನಲ್ಲಿ ಅಕ್ಸೆಲ್ಸೆನ್ ವಿರುದ್ಧ ಮೊದಲ ಗೇಮ್ನಲ್ಲಿ ಸೋಲು ಕಂಡರು. ಎರಡನೇ ಗೇಮ್ನಲ್ಲಿ ಪ್ರಣಯ್ ಚುರುಕಿನ ಆಟ ಪ್ರದರ್ಶಿಸಿದರು. ಎರಡನೇ ಗೇಮ್ನಲ್ಲಿ ಅಮೋಘ ಪ್ರದರ್ಶನ ನೀಡಿ ತಮ್ಮದಾಗಿಸಿಕೊಂಡರು. ಈ ಮೂಲಕ ಉಭಯ ಆಟಗಾರರು 1-1 ಗೇಮ್ಗಳಲ್ಲಿ ಜಯ ಸಾಧಿಸಿ ಸಮ ಬಲ ಸಾಧಿಸಿದರು.
ಮೂರನೇ ಗೇಮ್ನಲ್ಲಿ ಪ್ರಣಯ್ ಸೊಗಸಾದ ಪ್ರದರ್ಶನ ನೀಡಿದರು. ಅಲ್ಲದೆ ಆರಂಭದಲ್ಲಿ ಮುನ್ನಡೆ ಸಾಧಿಸಿದರು. ಈ ಅವಧಿಯಲ್ಲಿ ಡೆನ್ಮಾರ್ಕ್ ಆಟಗಾರನಿಗೆ ಸ್ಥಳೀಯ ಅಭಿಮಾನಿಗಳು ಅವರನ್ನು ಹುರಿದುಂಬಿಸಿದರು. ಆದರೆ, ಪ್ರಣಯ್ ಇದಕ್ಕೆಲ್ಲ ಧೃತಿ ಗೆಡದೆ ಆಡಿ ಅಂಕಗಳನ್ನು ಕಲೆ ಹಾಕುತ್ತಾ ಸಾಗಿದರು.
ಆಕ್ಸೆಲ್ಸೆನ್ ಸ್ಮ್ಯಾಶ್ ಶಾಟ್ಗಳನ್ನು ಸತತವಾಗಿ ಪ್ರಯೋಗಿಸಿ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದರು. ಅಲ್ಲದೆ ಪ್ರಣಯ್ಗೆ ಜಿದ್ದಾಜಿದ್ದಿನ ಫೈಟ್ ನೀಡಿದರು. ಈ ಹಂತದಲ್ಲಿ ಪ್ರಣಯ್ ಒತ್ತಡಕ್ಕೆ ಮಣಿಯದೆ 16-11ರ ವರೆಗೆ ಮುನ್ನಡೆ ಸಾಧಿಸಿದ್ದರು. 16-11 ರಿಂದ ಸ್ಕೋರ್ 18-14 ತಲುಪಿತು. ಪ್ರಣಯ್ ಆಕ್ರಮಣಕಾರಿ ಆಟ ಪ್ರದರ್ಶಿಸಿ 21-16 ರಿಂದ ಪಂದ್ಯ ಗೆದ್ದರು.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಪ್ರಣಯ್ಗೆ ಇದು ಮೊದಲ ಪದಕವಾಗಿದೆ. ಭಾರತದ ಪರ ಇದಕ್ಕೂ ಮೊದಲು ಪ್ರಕಾಶ್ ಪಡುಕೋಣೆ, ಸಾಯಿ ಪ್ರಣೀತ್, ಕಿಡಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಪದಕದ ಸಾಧನೆಯನ್ನು ಮಾಡಿದ್ದಾರೆ.
ಪುರುಷರ ಡಬಲ್ಸ್ನಲ್ಲಿ ಭಾರತದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜೋಡಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡು ನೇರ ಗೇಮ್ಗಳಲ್ಲಿ ಸೋಲು ಕಂಡರು. ಜೋಡಿ ಸಾತ್ವಿಕ್ ಚಿರಾಗ್ ಅವರನ್ನು 18-21, 19-21 ನೇರ ಗೇಮ್ಗಳಿಂದ ಡೆನ್ಮಾರ್ಕ್ನ ಕಿಮ್ ಅಸ್ಟ್ರಪ್ ಮತ್ತು ಆಂಡರ್ಸ್ ಸ್ಕರೂಪ್ ರಾಸ್ಮುಸ್ಸೆನ್ ಸೋಲಿಸಿದರು. ಭಾರತದ ಪರವಾಗಿ ಪದಕ ಪಕ್ಕಾ ಆಗಿದೆ. ಆದರೆ, ಪದಕದ ಬಣ್ಣ ಯಾವುದು ಎಂದು ಪ್ರಣಯ್ ಆಟ ನಿರ್ಧರಿಸಲಿದೆ.