ಬೆಂಗಳೂರು: 9 ಡ್ರೀಮ್ಸ್ ಸಂಸ್ಥೆಯ ವಿನೂತನ ಪರಿಕಲ್ಪನೆಯ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ ಫೆಬ್ರವರಿ 21 ಮತ್ತು 22ರಂದು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಅಂಗಣದಲ್ಲಿ ನಡೆಯಲಿದ್ದು, ಎಂಟು ತಂಡಗಳು ಭಾಗವಹಿಸಲಿವೆ. ಟೂರ್ನಿಯಲ್ಲಿ ಒಟ್ಟು 128 ಆಟಗಾರರು ಕಣಕ್ಕಿಳಿಯಲಿದ್ದಾರೆ.
ಜನಪ್ರತಿನಿಧಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ವೈದ್ಯರು, ಸ್ಯಾಂಡಲ್ವುಡ್ ತಾರೆಯರು ಹಾಗೂ ಪತ್ರಕರ್ತರು ಜೊತೆಯಾಗಿ ಮೈದಾನದಲ್ಲಿ ಕಾದಾಟ ನಡೆಸಲಿದ್ದಾರೆ. ಲೀಡರ್ಸ್ ಪ್ಲೇ.. ಫ್ರೆಂಡ್ಶಿಫ್ ವಿನ್ ಎಂಬ ಘೋಷ ವಾಕ್ಯದೊಂದಿಗೆ ಆರಂಭಗೊಂಡಿರುವ ಮೊದಲ ಆವೃತ್ತಿಯ ಟೂರ್ನಿಯ ಲಾಂಛನವನ್ನು ಸಿಎಂ ಸಿದ್ದರಾಮಯ್ಯನವರು ಅನಾವರಣಗೊಳಿಸಿದ್ದಾರೆ.

ಟೂರ್ನಿಯಲ್ಲಿ ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್, ಇನ್ಸ್ಪೈರ್ ಚಾಲೆಂಜರ್ಸ್, ದಿ ಕೆಫೆ ದಿವ್ಯಂ, ಎಟಿಎಸ್ ಅಟ್ಯಾಕರ್ಸ್, ಪ್ರೋ ವಿನ್ ಪ್ಯಾಂಥರ್ಸ್, ಎಸ್ಥೆಟಿಕ್ ಅಟ್ಯಾಕರ್ಸ್, ಟೆಲಿಕಾಂ ಸ್ಕೈ ಸ್ಟ್ರೈಕರ್ಸ್, ಕೆಜಿಎಫ್ ಸ್ಮಾಷರ್ಶ್ ತಂಡಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ. ಲೀಗ್ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಎರಡು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ.
ಎ ಬಣದಲ್ಲಿ ಇನ್ಸ್ಪೈಯರ್ ಚಾಲೆಂಜರ್ಸ್, ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್, ಎಸ್ಥೆಟಿಕ್ ಅಟ್ಯಾಕರ್ಸ್, ಟೀಮ್ ಕೆಫೆ ದಿವ್ಯಂ ತಂಡಗಳು ಸೆಣಸಾಟ ನಡೆಸಲಿವೆ. ಹಾಗೆಯೇ ಬಿ ಬಣದಲ್ಲಿ ಕೆಜಿಎಫ್ ಸ್ಮಾಷರ್ಸ್, ಟೆಲಿಕಾಂ ಸ್ಕೈ ಸ್ಟೈಕರ್ಸ್, ಎಟಿಎಸ್ ಅಟ್ಯಾಕರ್ಸ್, ಪ್ರೋ ವಿನ್ ಪ್ಯಾಂಥರ್ಸ್ ತಂಡಗಳು ಹೋರಾಟ ನಡೆಸಲಿವೆ. ಎರಡು ಗುಂಪುಗಳಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್ನಲ್ಲಿ ಕಾದಾಟ ನಡೆಸಲಿವೆ.
ಟೂರ್ನಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಪೊನ್ನಣ್ಣ, ಶಾಸಕರಾದ ಶರತ್ ಬಚ್ಚೇಗೌಡ, ಡಾ. ಮಂಥರ್ ಗೌಡ, ಮಾಜಿ ಶಾಸಕ ನಾರಾಯಣಸ್ವಾಮಿ, ಐಎಎಸ್ ಅಧಿಕಾರಿಗಳಾದ ಸೆಲ್ವಕುಮಾರ್, ಜಗದೀಶ್, ಐಪಿಎಸ್ ಅಧಿಕಾರಿಗಳಾದ ಅಲೋಕ್ ಕುಮಾರ್, ರಮೇಶ್ ಬಾನೋಥ್, ಕೆಪಿಎಸ್ ಅಧಿಕಾರಿ ಸತೀಶ್ ಕುಮಾರ್ ಸೇರಿದಂತೆ ಇತರರು ಪವರ್ ಪ್ಲೇ ವಿಭಾಗದಲ್ಲಿ ಆಡಲಿದ್ದಾರೆ.