ಹೈದರಾಬಾದ್, ನ. 8 : ಕೈಯಲ್ಲಿ ಹಿಡಿದಿರುವ ತುತ್ತು ಇನ್ನೇನು ಬಾಯಲ್ಲಿ ಸೇರಬೇಕು... ಅಷ್ಟರಲ್ಲಿ ಅನ್ನ ಹಾಕಿಟ್ಟಿದ್ದ ಪಾತ್ರೆಯಲ್ಲಿ ಸತ್ತುಬಿದ್ದ ಜಿರಳೆಯನ್ನು ಕಂಡರೆ ತುತ್ತು ತಿನ್ನಲು ಸಿದ್ಧನಾದವನಿಗೆ ಹೇಗಾಗಿರಬೇಡ? ಇಂಥ ಅನುಭವ ಆಗಿರುವುದು ಮಧ್ಯಾಹ್ನದ ಬಿಸಿಯೂಟ ಉಣ್ಣುವ ಸರಕಾರಿ ಶಾಲೆ ಮಕ್ಕಳಿಗಲ್ಲ. ಒಂದು ರಾಜ್ಯವನ್ನು ಪ್ರತಿನಿಧಿಸುವ ಕರ್ನಾಟಕದ ಕ್ರಿಕೆಟಿಗರಿಗೆ!
ಯಪ್ಪೋ! ಕ್ರಿಕೆಟಿಗರು ತಿನ್ನುವ ಸಮತೋಲಿತ ಆಹಾರದ ಬಗ್ಗೆ ಸಾಕಷ್ಟು ಗಮನ ಹರಿಸಲಾಗುತ್ತದೆ. ಅಂಥದ್ದರಲ್ಲೂ ಬೆಳಗಿನ ತಿಂಡಿ ಇಟ್ಟಿದ್ದ ಪಾತ್ರೆಯಲ್ಲಿಯೂ ಜಿರಳೆ? ಅದ್ಹೆಂಗಾಯ್ತೋ ಏನೋ ಒಟ್ಟಿನಲ್ಲಿ ಆಗಿದೆ. ಆದರೆ, ಹೀಗೆ ನಡೆದಿದೆ ಎಂದು ಹೆಸರು ಹೇಳಲು ಇಚ್ಛಿಸದ ಕರ್ನಾಟಕ ತಂಡದ ಅಧಿಕಾರಿಯೊಬ್ಬರು ಮುಖ ಕಿವುಚಿಕೊಂಡು ಒನ್ಇಂಡಿಯಾಗೆ ಈ ಸುದ್ದಿ ತಿಳಿಸಿದ್ದಾರೆ.
ಇದು ನಡೆದಿರುವುದು ಶುಕ್ರವಾರ, ನವೆಂಬರ್ 7ರಂದು. ವಿಜಯ್ ಹಜಾರೆ ಟ್ರೋಫಿಯ ಏಕದಿನ ಟೂರ್ನಾಮೆಂಟ್ ನಡೆಯುತ್ತಿರುವ ಸಂದರ್ಭದಲ್ಲಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಬೆಳಿಗ್ಗೆ ಬಡಿಸಿದ ಬಿಸಿಬಿಸಿ ತಿಂಡಿಯಲ್ಲಿ ಇಂಥದೊಂದು ಪ್ರಮಾದ ಜರುಗಿದೆ. [ಜಿರಳೆ ಹತ್ಯೆ ಕುರಿತ ಹಾಸ್ಯ ಪ್ರಸಂಗ]

ನಂತರ, ಆ ಎಲ್ಲ ತಿಂಡಿಯನ್ನು ತಿಪ್ಪೆಗೆ ಬಿಸಾಕಿ ಮತ್ತೆ ಫ್ರೆಶ್ ಆಗಿ ತಿಂಡಿಯನ್ನು ತಯಾರಿಸಿ ಕರ್ನಾಟಕದ ಆಟಗಾರರಿಗೆ ಬಡಿಸಲಾಯಿತು. ಆದರೆ, ಒಬ್ಬ ಆಟಗಾರ ಮಾತ್ರ, ನೀವೂ ಬೇಡ ನಿಮ್ಮ ತಿಂಡಿಯೂ ಬೇಡ ಅಂತ ಖಾಲಿ ಹೊಟ್ಟೆಯಲ್ಲಿಯೇ ಕ್ರಿಕೆಟ್ ಆಡಲು ನಿರ್ಧರಿಸಿದರು. ಬಹುಶಃ ಈ ಘಟನೆಯನ್ನು ಈ ಜನುಮದಲ್ಲಿ ಅವರು ಮರೆಯಲಿಕ್ಕಿಲ್ಲ. [ಜಿರಳೆ ತಿಂದುತಿಂದೇ ಪ್ರಾಣ ಬಿಟ್ಟ]