ಚಿಕ್ಕಮಗಳೂರು, ಡಿ.5: ಕಾಫಿ ನಾಡು, ಮಲೆನಾಡಿನ ಹೆಬ್ಬಾಗಿಲು ಚಿಕ್ಕಮಗಳೂರಿನಲ್ಲಿ ದೇಶದ ಟಾಪ್ ಮೋಟರ್ ಸ್ಫೋರ್ಟ್ ಉತ್ಸಾಹಿಗಳು ಮತ್ತೊಮ್ಮೆ ಸೇರುತ್ತಿದ್ದಾರೆ. ಬಹುನಿರೀಕ್ಷಿತ ಕಾಫಿ ಡೇ ರ್ಯಾಲಿ ಡಿ.12ರಿಂದ ಆರಂಭವಾಗಲಿದೆ.
ಎಫ್ಎಂಎಸ್ ಸಿಐ ಇಂಡಿಯನ್ ರ್ಯಾಲಿ ಚಾಂಪಿಯನ್ ಶಿಪ್ (IRC) 2014 ಡಿಸೆಂಬರ್ 12 ರಿಂದ 14 ರ ತನಕ ಚಿಕ್ಕಮಗಳೂರಿನ ಹಚ್ಚ ಹಸಿರು ತುಂಬಿದ ಕಾಫಿ ಎಸ್ಟೇಟ್ ಗಳ ನಡುವೆ ಜರುಗಲಿದೆ. ಸುಮಾರು 42 ಕಾರುಗಳು ಈ ಬಾರಿ ಪಾಲ್ಗೊಳ್ಳುತ್ತಿವೆ. ಡಿ.12ರಂದು ಆಂಬರ್ ವ್ಯಾಲಿ ಶಾಲೆಯ ಬಳಿ 2.30 ಗಂಟೆಗೆ ರ್ಯಾಲಿ ಆರಂಭವಾಗುತ್ತದೆ. ['ಕೆಫೆ ಕಾಫಿ ಡೇ' ಎಂಬ ಅಪ್ಪಟ ಕನ್ನಡ ಬ್ರ್ಯಾಂಡ್]
ಚಿಕ್ಕಮಗಳೂರಿನ ಮೋಟರ್ ಸ್ಫೋರ್ಟ್ಸ್ ಕ್ಲಬ್ (ಎಂಎಸ್ಸಿಸಿ),ದಿ ಸೆರಾಯಿ ರೆಸಾರ್ಟ್ಸ್, ಕೆಫೆ ಕಾಫಿ ಡೇ ಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿರುವ ಈ ಮೋಟರ್ ರ್ಯಾಲಿಗೆ ಫೆಡೆರೇಷನ್ ಆಫ್ ಮೋಟರ್ ಸ್ಫೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ(ಎಫ್ ಎಂಎಸ್ ಸಿಐ) ಮಾನ್ಯತೆಯಿದೆ.

ರ್ಯಾಲಿಯಲ್ಲಿ ಒಟ್ಟು 329.88 ಕಿ.ಮೀ ದೂರ ಕ್ರಮಿಸಲಿದೆ. ಮೂರು ವಿಭಾಗದ ಚಟ್ಟನಹಳ್ಳಿ(10.70 ಕಿ.ಮೀ), ಕುಮಾರ್ ಗೊಡೆ(10.61 ಕಿ.ಮೀ), ಚಂದ್ರಾಪುರ(14.21 ಕಿ.ಮೀ) ದಲ್ಲಿ ನಡೆಯಲಿದೆ. ಚಟ್ಟನಹಳ್ಳಿಯ ಹುಲ್ಲಿಹಂಡ್ಲು ಎಸ್ಟೇಟ್ ಮಾಲೀಕ, ಮಾಜಿ ರೇಸ್ ಚಾಲಕ ಎನ್ ಸಿ ಅರುಣ್ ಅವರು ತಮ್ಮ ಎಸ್ಟೇಟ್ ನಲ್ಲಿ ಟ್ರ್ಯಾಕ್ ರಚಿಸಲು ಅವಕಾಶ ಮಾಡಿಕೊಂಡಿದ್ದಕ್ಕೆ ಆಯೋಜಕರು ಅಭಿನಂದನೆ ಸಲ್ಲಿಸಿದ್ದಾರೆ.
ಪಾಸ್ ಎಲ್ಲಿ ಸಿಗುತ್ತೆ?: ಚಿಕ್ಕಮಗಳೂರಿನ ಸೂಪರ್ ಮಾರ್ಕೆಟುಗಳು, ಆರೇಂಜ್, ಪೈ ಅಸೋಸಿಯೇಟ್ಸ್, ವಸಂತ್ ವಿಹಾರ್ ಲಾಡ್ಜಿಂಗ್, ಕಿಡ್ಸ್ ಅವಿನ್ಯೂ, ಜಾಕ್ ಅಂಡ್ ಜಿಲ್ ಮಳಿಗೆಯಲ್ಲಿ ಪಾಸ್ ಗಳು ಲಭ್ಯ. [ಪ್ರಕೃತಿ ಮಡಿಲ ದೇವವೃಂದ ಕ್ಷೇತ್ರ]
ಜೊತೆಗೆ ಅಂಬರ್ ವ್ಯಾಲಿ ಶಾಲೆ, ಎಬಿಸಿ ಕಚೇರಿ, ಕಾಫಿ ಡೇ ಸ್ಕ್ವೇರ್(ಬೆಂಗಳೂರು), ಕೆಫೆ ಕಾಫಿಡೇ(ಚಿಕ್ಕಮಗಳೂರು) ಎಂಎಸ್ ಸಿಸಿ ಕಚೇರಿಗಳಲ್ಲೂ ಪ್ರವೇಶ ಪಾಸ್ ಗಳು ಸಿಗಲಿದೆ.
ಈ ಬಹು-ನಿರೀಕ್ಷಿತ ರ್ಯಾಲಿಯ ಬಗ್ಗೆ ಮಾತನಾಡಿದ ಕಾಫಿ ಡೇ ಹೋಟೇಲ್ಸ್ ಅಂಡ್ ರೆಸಾರ್ಟ್ ನಿರ್ದೇಶಕ ವೆಂಕಟೇಶ್ ಮಾತನಾಡಿ: ಕಾಫಿ ಡೇ ರ್ಯಾಲಿ ಕ್ರೀಡಾ ಜಗತ್ತಿನ ಅತ್ಯಂತ ನಿರೀಕ್ಷಿತ ಸ್ಪರ್ಧೆಗಳಲ್ಲಿ ಒಂದಾಗಿದೆ. ದೇಶದ ನಾನಾ ಕಡೆಗಳಿಂದ ಈ ರ್ಯಾಲಿಗೆ ಅದ್ಭುತ ಪ್ರತಿಕ್ರಿಯೆಗಳು ದೊರೆಯುತ್ತಿವೆ ಮತ್ತು ದೂರ ದೂರಗಳಿಂದ ಜನರು ಚಿಕ್ಕಮಗಳೂರಿಗೆ ಈ ರ್ಯಾಲಿಯನ್ನು ನೋಡಲೆಂದೇ ಬರುತ್ತಾರೆ.
ಇಲ್ಲಿನ ಪರಿಸ್ಥಿತಿಗಳು ಚಾಲಕರಿಗೆ ಭಾರಿ ಸವಾಲನ್ನು ಒಡ್ಡುತ್ತವೆ. ಈ ವರ್ಷ 10,000 ಜನ ವೀಕ್ಷಕರು ಬರುವ ಅಂದಾಜಿದೆ. ಕಾಫಿ ಡೇ ಮೋಟಾರ್ ಸ್ಫೋರ್ಟ್ಸ್ ಬಗ್ಗೆ ಅತ್ಯಂತ ಉತ್ಕಟ ಪ್ರೀತಿಯನ್ನು ಹೊಂದಿದೆ. ಇನ್ನು ಕೆಲವೇ ವರ್ಷಗಳಲ್ಲಿ ಈ ಕ್ರೀಡೆ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆಯಲಿದೆ ಎಂದರು.

ಇತರ ಸ್ಟಾರ್ ಆಕರ್ಷಣೆಗಳೆಂದರೆ 2013 ಏಷ್ಯಾ-ಪೆಸಿಫಿಕ್ ರ್ಯಾಲಿ ಚಾಂಪಿಯನ್ ಗೌರವ್ ಗಿಲ್, ಅವರು ಸಹ-ಚಾಲಕ ಮೂಸಾ ಶೆರೀಫ್ ಜೊತೆ ಮಹೀಂದ್ರಾ ಅಡ್ವೆಂಚರ್ ತಂಡದ ಪರ Mahindra XUV500 ನಡೆಸಲಿದ್ದಾರೆ. ಗಿಲ್ ಮತ್ತು ಶೆರೀಫ್ ಈಗಾಗಲೇ ಸಮಗ್ರ ರಾಷ್ಟೀಯ ಪದಕ ಗೆದ್ದಿದ್ದಾರೆ.
IRC 2000 ವರ್ಗದಲ್ಲಿ ಬೆಂಗಳೂರಿನ ರಾಹುಲ್ ಕಾಂತರಾಜ್-ವಿವೇಕ್ ಭಟ್ (ಯೋಕೋಹಾಮ ತಂಡ) FMSCI 1600 ವರ್ಗದಲ್ಲಿ ಅದಿತ್ ಕೆ ಸಿ-ಹರೀಶ್ ಕೆ ಎನ್ ಕೂಡ ರಾಷ್ಟ್ರೀಯ ಪದಕ ಗೆದ್ದಿದ್ದಾರೆ. [ಕೆಫೆ ಕಾಫಿ ಡೇ vs ಟಾಟಾ ಸ್ಟಾರ್ ಬಕ್ಸ್ ಸಮರ]
IRC 1600 ವರ್ಗದಲ್ಲಿ ಫಲ್ಗುಣ ಅರಸ್ (ಅನೂಪ್ ಕುಮಾರ್) 145 ಅಂಕಗಳನ್ನು ಹೊಂದಿದ್ದರೆ ಅರ್ಜುನ್ ರಾವ್ ಅರೂರ್ (ಸತೀಶ್ ರಾಜಗೋಪಾಲ್) 115 ಅಂಕಗಳನ್ನು ಹೊಂದಿದ್ದಾರೆ. ಇವರಿಬ್ಬರ ಹೋರಾಟ ನೋಡಬೇಕಿದೆ.