
ನವದೆಹಲಿ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ರಸ್ಲರ್ ಸುಶೀಲ್ ಕುಮಾರ್ ಬಂಧನಕ್ಕೆ ನೆರವಾಗುವಂತ ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು 1 ಲಕ್ಷ ರೂ. ನಗದು ಪುರಸ್ಕಾರ ಘೋಷಿಸಿದ್ದಾರೆ. ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆದ ಜಗಳದಲ್ಲಿ ರಸ್ಲರ್ ಒಬ್ಬ ಸಾವನ್ನಪ್ಪಿರುವ ದೂರಿಗೆ ಸಂಬಂಧಿಸಿ ಪೊಲೀಸರು ಸುಶೀಲ್ ಅವರನ್ನು ಹುಡುಕುತ್ತಿದ್ದಾರೆ.
ಸುಶೀಲ್ ಕುಮಾರ್ ಜೊತೆ ತಲೆ ಮರೆಸಿಕೊಂಡಿರುವ ಮತ್ತೊಬ್ಬ ರಸ್ಲರ್ ಅಜಯ್ ಕುಮಾರ್ ಬಂಧನಕ್ಕೆ ನೆರವಾಗುವವರಿಗೂ 50,000 ರೂ. ಘೋಷಿಸಲಾಗಿದೆ. ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿತ್ತು. ಈ ಜಗಳ ಹೊಡೆದಾಟಕ್ಕೆ ತಿರುಗಿತ್ತು. ಹೀಗಾಗಿ ಈ ಘಟನೆಯಲ್ಲಿ ಹಲ್ಲೆಗೊಳಗಾದ ರಸ್ಲರ್ ಒಬ್ಬ ಮೃತನಾಗಿದ್ದ. ಘಟನೆಗೆ ಸಂಬಂಧವಿರುವ ಆರೋಪ ಹೊಂದಿರುವ ಸುಶೀಲ್ ಕುಮಾರ್ ಮತ್ತು ಅಜಯ್ ಕುಮಾರ್ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.
'ನಾವು ಸುಶೀಲ್ ಕುಮಾರ್ ಬಂಧನಕ್ಕೆ ನೆರವು ನೀಡುವವರಿಗೆ 1 ಲಕ್ಷ ರೂ. ಮತ್ತು ಆತನ ಸಹಚರ ಅಜಯ್ ಕುಮಾರ್ ಬಗ್ಗೆ ಸುಳಿವು ನೀಡುವವರಿಗೆ 50,000 ರೂ. ಘೋಷಿಸುತ್ತಿದ್ದೇವೆ ಅಜಯ್ ಕೂಡ ಸುಶೀಲ್ ಜೊತೆ ಪರಾರಿಯಾಗಿದ್ದಾರೆ,' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ವಾರ ದೆಹಲಿ ಕೋರ್ಟ್ ಸುಶೀಲ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ನೀಡಿತ್ತು. ಇದಕ್ಕೂ ಮುನ್ನ ಸುಶೀಲ್ ವಿರುದ್ಧ ಲುಕೌಟ್ ನೋಟಿಸ್ ನೀಡಲಾಗಿತ್ತು.