
ನವದೆಹಲಿ, ಮೇ 23: ಜಪಾನ್ನ ಟೋಕಿಯೋದಲ್ಲಿ ನಡೆಯಲಿದ್ದ 2020ರ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಲಭಿಸಲಿದ್ದ ಪದಕದ ಅವಕಾಶವೇ ಕೈ ತಪ್ಪಿದೆ. ಗಾಯದಿಂದ ಬಳಲುತ್ತಿರುವ ಭಾರತದ ಭರವಸೆಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಏಷ್ಯನ್ ಚಾಂಪಿಯನ್ಷಿಪ್ನಿಂದ ಹೊರಗುಳಿಯುತ್ತಿದ್ದು, ಟೋಕಿಯೋ ಒಲಿಂಪಿಕ್ಸ್ ಒಲಂಪಿಕ್ಸ್ನಲ್ಲೂ ಪಾಲ್ಗೊಳ್ಳೋದು ಅನುಮಾನವಾಗಿದೆ.
ದೀಪಾ ಕರ್ಮಾಕರ್ ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಗಾಯ ಚೇತರಿಕೆಗೆ ಸೆಪ್ಟೆಂಬರ್ ವರೆಗೂ ಕಾಯಬೇಕೆಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಜೂನ್ 13-16ರ ವರೆಗೆ ಮಂಗೋಲಿಯಾದಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ಷಿಪ್ನಿಂದ ದೀಪಾ ಅನಿವಾರ್ಯವಾಗಿ ಹೊರಗುಳಿಯಬೇಕಾಗಿದೆ.
ಕರ್ಮಾಕರ್, ಏಷ್ಯನ್ ಚಾಂಪಿಯನ್ಷಿಪ್ನಿಂದ ಹಿಂದೆ ಸರಿದಿರುವುದನ್ನು ದೀಪಾ ಕೋಚ್ ಬಿಶ್ವೇಶ್ವರ್ ನಂದಿ ಖಾತರಿಪಡಿಸಿದ್ದಾರೆ. ಜಿಮ್ನ್ಯಾಸ್ಟ್ಗಳ ಒಲಿಂಪಿಕ್ಸ್ ಪ್ರವೇಶ ಖಾತರಿಯಾಗಬೇಕಾದರೆ 8 ವಿಶ್ವಕಪ್ ಚಾಂಪಿಯನ್ಷಿಪ್ಗಳಲ್ಲಿ ಅಗ್ರ ಮೂರು ಪ್ರದರ್ಶನ ಪರಿಗಣಿಸಲಾಗುತ್ತದೆ.
ಕಳೆದ ಮಾರ್ಚ್ನಲ್ಲಿ ಅಜೆರ್ಬೈಜಾನ್ ನ ಬಾಕು ವಿಶ್ವಕಪ್ ಕೂಟದಲ್ಲಿ ಪಾಲ್ಗೊಂಡಿದ್ದ ದೀಪಾ, ಗಾಯಕ್ಕೀಡಾಗಿದ್ದರು. ಹೀಗಾಗಿ ದೋಹಾ ವಿಶ್ವಕಪ್ ಕೂಟದಿಂದ ಹಿಂದೆ ಸರಿದಿದ್ದರು. ಈಗ ಮತ್ತೂ ಪ್ರಮುಖ ಸ್ಪರ್ಧಾಕೂಟಗಳಿಂದ ದೀಪಾ ಹಿಂದೆ ಸರಿಯುವುದರಲ್ಲಿದ್ದಾರೆ. ಇದು ದೀಪಾರ ಒಲಿಂಪಿಕ್ಸ್ ಪ್ರವೇಶಕ್ಕೆ ಮುಳುವಾಗಲಿದೆ.