
ನವದೆಹಲಿ, ನವೆಂಬರ್ 25: ಭಾರತದ ಸ್ಟಾರ್ ಜಿಮ್ನಾಸ್ಟ್ ದೀಪಾ ಕರ್ಮಾಕರ್, 2020ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದರೆ ಮುಂಬರಲಿರುವ ವಿಶ್ವಕಪ್ ನಲ್ಲಿ ಅವರು ಚಿನ್ನವನ್ನೇ ಗೆಲ್ಲಬೇಕು ಎಂದು ದೀಪಾ ಕರ್ಮಾಕರ್ ಅವರ ಕೋಚ್ ಬಿಶ್ವೇಶ್ವರ್ ನಂದಿ ಹೇಳಿದ್ದಾರೆ.
ಜರ್ಮನಿಯ ಕಾಟ್ಬಸ್ ನಲ್ಲಿ ಶನಿವಾರ (ನವೆಂಬರ್ 24) ನಡೆದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಕಪ್ ನ ವಾಲ್ಟ್ ವಿಭಾಗದಲ್ಲಿ ದೀಪಾ ಭಾರತಕ್ಕೆ ಕಂಚು ಜಯಿಸಿದ್ದರು. ಆದರೆ 2019ರ ವಿಶ್ವಕಪ್ ನಲ್ಲಿ ದೀಪಾ ಅವರು ಚಿನ್ನ ಗೆಲ್ಲುವಂತಾಗಬೇಕು ಎಂದು ಬಯಸಿರುವ ಕೋಚ್ ಬಿಶ್ವೇಶ್ವರ್, ದೀಪಾ ಮುಂದಿನವರ್ಷ ಚಿನ್ನ ಗೆದ್ದರೆ ಮಾತ್ರ ಒಲಿಂಪಿಕ್ಸ್ಗೆ ಅರ್ಹತೆ ಸಿಗಲಿದೆ ಎಂದಿದ್ದಾರೆ.
'ತಯಾರಿಗಾಗಿ ಕೊಂಚವೇ ಅವಕಾಶ ಲಭಿಸಿತ್ತಾದರೂ ದೀಪಾ ಸ್ಪರ್ಧೆಯಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದ್ದಾರೆ. ಅವರ ಈ ಸಾಧನೆ ಖುಷಿ ತಂದಿದೆ. ಆದರೆ ಮುಂದಿನ ವರ್ಷ ದೀಪಾ ಚಿನ್ನ ಗೆದ್ದರೆ ಮಾತ್ರ ಅವರಿಗೆ 2020 ಒಲಿಂಪಿಕ್ಸ್ಗೆ ಪ್ರವೇಶ ಸಿಗಲಿದೆ. ದೀಪಾ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ ಎಂಬ ನಂಬಿಕೆಯೂ ನನಗಿದೆ' ಎಂದು ನಂದಿ ವಿಶ್ವಾಸ ವ್ಯಕ್ತಪಡಿಸಿದರು.