
ನವದೆಹಲಿ, ಸೆಪ್ಟೆಂಬರ್ 17: ಭಾರತದ ಸ್ಟಾರ್ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರ ಕೋಚ್ ವಿಜಯ್ ಶರ್ಮಾ, ರಿಷಬ್ ಪಂತ್ ಕೋಚ್ ತಾರಕ್ ಸಿನ್ಹಾ ಅವರನ್ನು ಸೇರಿಸಿ ಏಳು ಮಂದಿಯ ಹೆಸರುಗಳನ್ನು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಶರ್ಮಾ ಮತ್ತು ಸಿನ್ಹಾ ಅವರನ್ನು ಒಳಗೊಂಡು ಕ್ಲಾರೆನ್ಸ್ ಲೋಬೋ (ಹಾಕಿ), ಜೀವನ್ ಶರ್ಮಾ (ಜೂಡೋ), ಸಿಎ ಕುಟ್ಟಪ್ಪ (ಬಾಕ್ಸಿಂಗ್), ಸ್ಟಾರ್ ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ ಅವರ ತಂದೆ ಹಾಗೂ ಕೋಚ್ ಕೂಡ ಆಗಿರುವ ಶ್ರೀನಿವಾಸ ರಾವ್ ಹೆಸರುಗಳು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸ್ಸಾಗಿವೆ.
ಧ್ಯಾನ್ ಚಂದ್ ಪ್ರಶಸ್ತಿಗಾಗಿ ಭರತ್ ಛೆಟ್ರಿ (ಹಾಕಿ), ಸತ್ಯ ದೇವ್ ಪ್ರಸಾದ್ (ಅರ್ಚರಿ), ದಾದು ಚೌಗುಲೆ (ಕುಸ್ತಿ) ಮತ್ತು ಬೋಬಿ ಅಲೋಶಿಯಸ್ (ಅಥ್ಲೆಟಿಕ್ಸ್) ಹೆಸರುಗಳು ಶಿಫಾರಸ್ಸಾಗಿವೆ. ಧ್ಯಾನ್ ಚಂದ್ ಪ್ರಶಸ್ತಿಯನ್ನು ಕ್ರೀಡಾಪಟುಗಳ ಜೀವಮಾನದ ಸಾಧನೆಗಾಗಿ ನೀಡಲಾದರೆ, ದ್ರೋಣಾಚಾರ್ಯ ಪ್ರಶಸ್ತಿಯನ್ನು ಅತ್ಯುತ್ತಮ ಕೋಚಿಂಗ್ ಗಾಗಿ ನೀಡಲಾಗುತ್ತದೆ.