
ಕರ್ನಾಟಕದ ಹಿರಿಯ ಅ್ಯಥ್ಲೀಟಿಕ್ ಕೋಚ್ ಪುರುಷೋತ್ತಮ ರೈ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಘೋಷಣೆಯಾದ ಕ್ರೀಡಾ ಪ್ರಶಸ್ತಿಯಲ್ಲಿ ಪುರುಷೋತ್ತಮ್ ಅವರು ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಅವರು ಇಹಲೋಕವನ್ನು ತ್ಯಜಿಸಿದ್ದಾರೆ.
ಜೀವಮಾನದ ಸಾಧನೆಗಾಗಿ ಪುರುಷೋತ್ತಮ್ ರೈ ಅವರು ದ್ರೋಣಾಚಾರ್ಯ ಪ್ರಶಸ್ತಿಗೆ ಪಾತ್ರರಾಗದ್ದರು. 79 ವರ್ಷ ವಯಸ್ಸಿನ ಪುರುಷೋತ್ತಮ ರೈ ಗರಡಿಯಲ್ಲಿ ಸಾವಿರಾರು ಕ್ರೀಡಾಪಟುಗಳು ತಯಾರಾಗಿದ್ದರು. ಭಾನುವಾರ ನಡೆಯಲಿರುವ ವರ್ಚುವಲ್ ಕಾರ್ಯಕ್ರಮದಲ್ಲಿ ಪುರುಷೋತ್ತಮ ರೈ ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸಬೇಕಾಗಿತ್ತು.
'ಅವರು ರಾಷ್ಟ್ರ ಪ್ರಶಸ್ತಿಯ ಪಡೆಯುವ ಸಲುವಾಗಿ ಅದರ ಪೂರ್ವ ತಯಾರಿಯಲ್ಲಿ ಭಾಗಿಯಾಗಿದ್ದರು. ಆದರೆ ಅದಾದ ಬಳಿಕ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ' ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಭಾರತದ ಅತ್ಯುತ್ತಮ ಅಥ್ಲೀಟ್ಗಳಾಗಿ ಖ್ಯಾತರಾದ ಅಶ್ವಿನಿ ನಾಚಪ್ಪ, ಮುರಳಿ ಕುಟ್ಟನ್, ರೋಸ ಕುಟ್ಟಿ ಸೇರಿದಂತೆ ಅನೇಕ ಅಥ್ಲೀಟ್ಗಳು ಪುರುಷೋತ್ತಮ್ ರೈ ಅವರ ತರಬೇತಿಯಲ್ಲಿ ಪಳಗಿದ್ದರು. 1987ರ ವಿಶ್ವ ಅಥ್ಲಿಟಿಕ್ ಚಾಂಪಿಯನ್ಷಿಪ್, 1988ರ ಏಷ್ಯನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್ಷಿಪ್ ಹಾಗೂ 1999ರ ಸೌತ್ ಏಷ್ಯನ್ ಗೇಮ್ಸ್ನ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಪುರುಷೋತ್ತಮ್ ರೈ ಅವರು 2001ರಲ್ಲಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(SAI) ಕೋಚ್ ಹುದ್ದೆಯಿಂದ ನಿವೃತ್ತರಾದರು. ಕೋಚ್ ಆಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಕಾರಣ ಕೋಚ್ ದ್ರೋಣಾಚಾರ್ಯ ಪ್ರಶಸ್ತಿ ಪಡೆಯುವ ಕನಸನ್ನು ದಶಕಗಳಿಂದ ಹೊಂದಿದ್ದ ರೈ ಅವರು ಅದನ್ನು ಸ್ವೀಕರಿಸುವ ಮುನ್ನವೇ ವಿಧಿವಶರಾಗಿದ್ದಾರೆ.