ಬೆಂಗಳೂರು, ನ. 6 : ಶೂಟರ್ ಪ್ರಕಾಶ್ ನಂಜಪ್ಪ, ಲಾಂಗ್ ಜಂಪ್ ಕ್ರೀಡಾಪಟು ಎಂ.ಅರ್ಶದ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ 15 ಕ್ರೀಡಾಪಟುಗಳಿಗೆ 2013ನೇ ಸಾಲಿನ 'ಏಕಲವ್ಯ ಪ್ರಶಸ್ತಿ' ಘೋಷಣೆಯಾಗಿದೆ. ಅಲ್ಲದೇ ಕ್ರೀಡಾಪಟುಗಳ ಸಾಧನೆಗೆ ನೆರವಾದ ನಾಲ್ವರು ತರಬೇತುದಾರರಿಗೆ 'ಜೀವಮಾನ ಸಾಧನೆ ಪ್ರಶಸ್ತಿ' ಮತ್ತು 10 ಮಂದಿ ಕ್ರೀಡಾಪಟುಗಳಿಗೆ 'ಕರ್ನಾಟಕ ಕ್ರೀಡಾ ರತ್ನ' ಪ್ರಶಸ್ತಿ ನೀಡಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಕ್ರೀಡಾ ಸಚಿವ ಕೆ.ಅಭಯ್ಚಂದ್ರ ಜೈನ್, ವಿವಿಧ ಕ್ರೀಡೆಗಳಲ್ಲಿ ಅಪ್ರತಿಮ ಹಾಗೂ ಗಮನಾರ್ಹ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.[ಶೂಟಿಂಗ್ ನಲ್ಲಿ ಬೆಳ್ಳಿ ಗೆದ್ದ ಬೆಂಗಳೂರಿನ ಪ್ರಕಾಶ್]

ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 6 ರಂದು ಸಂಜೆ ವಿಧಾನ ಸೌಧದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಏಕಲವ್ಯ ಪ್ರಶಸ್ತಿ 2 ಲಕ್ಷ ರೂ.ನಗದು ಮತ್ತು ಕಂಚಿನ ಪದಕವ ಒಳಗೊಂಡಿರುತ್ತದೆ
ಏಕಲವ್ಯ ಪ್ರಶಸ್ತಿ ಪುರಸ್ಕೃತರು
ಪಿ.ಎನ್.ಪ್ರಕಾಶ್(ರೈಫಲ್ ಶೂಟಿಂಗ್), ಎಂ.ಅರ್ಶದ್(ಅಥ್ಲೆಟಿಕ್ಸ್), ಡಿ.ಗುರುಪ್ರಸಾದ್(ಬ್ಯಾಡ್ಮಿಂಟನ್), ಪಿ.ಯು.ನವನೀತ(ಬಾಸ್ಕೆಟ್ಬಾಲ್), ಶೋಧನ್ ಕುಮಾರ್ ರೈ(ಬಾಡಿ ಬಿಲ್ಡಿಂಗ್), ಡಿ.ಯಶಸ್ (ಚೆಸ್), ಎನ್.ಲೋಕೇಶ್ (ಸೈಕ್ಲಿಂಗ್), ಆರ್.ವಿಶಾಲ್ ಕುಮಾರ್(ಫುಟ್ಬಾಲ್), ಕೆ.ಎಂ.ಸೋಮಣ್ಣ (ಹಾಕಿ), ಬಿ.ಆರ್.ನಿಕ್ಷೇಪ್(ಲಾನ್ ಟೆನಿಸ್), ಬಿ.ಆನಂದ್ ಕುಮಾರ್(ಬ್ಯಾಡ್ಮಿಂಟನ್, ಅಂಗವಿಕಲ), ಅಕ್ಷತಾ ಪೂಜಾರ್ತಿ (ಪವರ್ ಲಿಫ್ಟಿಂಗ್), ಅಶ್ವಿನ್ ಮೆನನ್(ಈಜು), ವಿ.ಆರ್.ಸನೋಜ್(ವಾಲಿಬಾಲ್), ಪ್ರೇಮ ಹುಚ್ಚಣ್ಣಮ್ (ಕುಸ್ತಿ).
ಕರ್ನಾಟಕ ಕ್ರೀಡಾ ರತ್ನ ಪುರಸ್ಕೃತರು
ಗ್ರಾಮೀಣ ಕ್ರೀಡಾಪಟುಗಳನ್ನು ಉತ್ತೇಜಿಸಲು ಈ ಪ್ರಶಸ್ತಿ ನೀಡಲಾಗುತ್ತಿದ್ದು ದೇಶಿ ಕ್ರೀಡೆಗಳಲ್ಲಿ ಸಾಧನೆ ತೋರಿದ 10 ಜನರಿಗೆ ಪುರಸ್ಕಾರ ನೀಡಲಾಗುತ್ತಿದೆ. ಪ್ರಶಸ್ತಿ 1 ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿದೆ.[ಪಿಟಿ ಉಷಾ ದಾಖಲೆ ಮುರಿದ ನಮ್ಮ ಶರತ್]
ವಿಜೇತರು: ಸಂತೋಷ್ ನಾಯಕ್(ಆಟ್ಯಾ-ಪಟ್ಯಾ), ಎ.ಆರ್.ಶ್ರುತಿ (ಬಾಲ್ ಬ್ಯಾಡ್ಮಿಂಟನ್), ಕುಮಾರ್ ಎಸ್.ಜಗದೇವ (ಗುಂಡು ಎತ್ತುವುದು), ಕೆ.ಎಚ್.ವಿನಯ್ ಕುಮಾರ್(ಖೋ-ಖೋ), ಮಾರುತಿ ವೈ ಬಾರಾಕೆರ್(ಮಲ್ಲಕಂಬ), ಐಶ್ವರ್ಯ ಎಂ.ದಳವಿ(ಜಂಗಿ -ಮಟ್ಟಿ-ಕುಸ್ತಿ), ಮೊಹಮ್ಮದ್ ಆಖಿಬ್(ಥ್ರೋ ಬಾಲ್), ಪಲಿಮಾರು ದೇವೇಂದ್ರ ಕೊಟ್ಯಾನ್(ಕಂಬಳ), ಗೋಪಾಲ್ ಖಾರ್ವಿ(ವಿಶಿಷ್ಟ ಈಜು), ಎಸ್.ಸಿ. ನಾಗಾನಂದ ಸ್ವಾಮಿ (ಜಲಸ್ಥಂಭನ).
ಜೀವಮಾನದ ಸಾಧನೆ ಪ್ರಶಸ್ತಿ
ನಾಲ್ವರು ಕ್ರೀಡಾ ತರಬೇತುದಾರರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 1.5 ಲಕ್ಷ ರೂ.ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
ವಿಜೇತರು: ಗಣಪತಿ ಮನೋಹರನ್(ಬಾಕ್ಸಿಂಗ್), ಎಂ.ಸುಮಿತ್ರಾ ಕುಮಾರ್(ದೇಹಧಾರ್ಡ್ಯ),ಮಣಿ (ಕಬಡ್ಡಿ), ಮೊಹಮ್ಮದ್ ದಾದಾ ಪೀರ್ (ಫುಟ್ಬಾಲ್). ಅಲ್ಲದೇ ಇದೇ ಸಂದರ್ಭ ಏಷ್ಯನ್ ಗೇಮ್ಸ್ ಪದಕ ವಿಜೇತರು ಮತ್ತು ಪ್ಯಾರಾಲಿಂಪಿಕ್ಸ್ನಲ್ಲಿ ಸಾಧನೆ ಮಾಡಿದ ಆಟಗಾರರನ್ನು ಸನ್ಮಾನಿಸಲಾಗುವುದು ಎಂದು ಜೈನ್ ತಿಳಿಸಿದ್ದಾರೆ.