ಮಂಗಳೂರು ಜನವರಿ 16: ಪುಣೆಯ ಬಾಳೇವಾಡಿಯಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಈಜುಸ್ಪರ್ಧೆಯಲ್ಲಿ ಮಂಗಳೂರಿನ ಪ್ರತಿಭೆ ರಚನಾ ರಾವ್ ಬೆಳ್ಳಿ ಪದಕ ಜಯಿಸಿದ್ದಾರೆ. ನಗರದ ಮಂಗಳಾ ಈಜು ಕ್ಲಬ್ನ ಉದಯೋನ್ಮುಖ ಪ್ರತಿಭೆಯಾಗಿರುವ ರಚನಾ ಎಸ್. ಆರ್. ರಾವ್ ಬಾಲಕಿಯರ 17ನೇ ವಯೋಮಿತಿ ವಿಭಾಗದಲ್ಲಿ ಇಂದು ನಡೆದ 50 ಮೀ. ಬ್ರೆಸ್ಟ್ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಖೇಲೋ ಇಂಡಿಯಾದಲ್ಲಿ ಕರಾವಳಿ ಬಾಲಕಿಯರ ಪಾರಮ್ಯ
ಈಕೆ ಜನವರಿ.13 ರಂದು ನಡೆದ 4 x 100 ಮೀಟರ್ ಮೆಡ್ಲೆ ರಿಲೆಯಲ್ಲಿ 100 ಮೀ. ಬ್ರೆಸ್ಟ್ ಸ್ಟ್ರೋಕ್ನಲ್ಲಿ ಅತ್ಯುತ್ತಮವಾಗಿ ಈಜಿ ಕರ್ನಾಟಕ ತಂಡಕ್ಕೆ ಚಿನ್ನದ ಪದಕ ಸಿಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಳು. ಅಲ್ಲದೇ 100 ಮೀ. ಬ್ರೆಸ್ಟ್ ಸ್ಟ್ರೋಕ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಜಯಸಿದ್ದಾಳೆ.
ಈಕೆ ಮಂಗಳೂರಿನ ರಾಮಕೃಷ್ಣ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದು ರಾಧಾಕೃಷ್ಣ ರಾವ್ ಹಾಗೂ ಸುಮಿತ್ರ ರಾವ್ ಇವರ ಪುತ್ರಿ, ಮಂಗಳಾ ಈಜು ಕ್ಲಬ್ಬಿನ ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ ಮತ್ತು ಸಹಾಯಕ ತರಬೇತುದಾರರಾದ ಎಂ. ಶಿವಾನಂದ ಗಟ್ಟಿ, ಪುಂಡಲೀಕ್ ಖಾರ್ವಿ, ಶಿಶಿರ್ ಎಸ್. ಗಟ್ಟಿ ಮತ್ತು ಶುಭಂ ಇವರಿಂದ ಈಕೆ ತರಬೇತಿ ಪಡೆಯುತ್ತಿದ್ದಾಳೆ.